ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೀಮಂದಾರ್–ಸೈದ್ಪೋರಾ ಪ್ರದೇಶದ ದಟ್ಟ ಹಣ್ಣಿನ ತೋಟದಲ್ಲಿ ಅಡಗಿರುವ ಇಬ್ಬರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ಮುಂದುವರಿದಿದೆ.
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್ಪಿಎಫ್ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರು ತಪ್ಪಿಸಿಕೊಳ್ಳದಂತೆ ಇಡೀ ಪ್ರದೇಶವನ್ನು ಸುತ್ತುವರಿದಿವೆ. ದಟ್ಟ ತೋಟವನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕಿರುವ ಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಭದ್ರತಾ ಪಡೆಗಳ ಬಲೆಗೆ ಸಿಲುಕಿರುವ ಉಗ್ರರನ್ನು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಮೂಲದ ಜಕೀರ್ ಅಹ್ಮದ್ ಗಣೈ ಮತ್ತು ಆತನ ಸಹಚರ ಲತೀಫ್ ಭಟ್ ಎಂದು ಗುರುತಿಸಲಾಗಿದೆ. ಇವರಲ್ಲಿ ಜಕೀರ್ ಅಹ್ಮದ್ ಗಣೈ ‘A++’ ವರ್ಗದ ಅತ್ಯಂತ ಅಪಾಯಕಾರಿ ಉಗ್ರನಾಗಿದ್ದು, ಹಲವು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. 2025ರ ಪಹಲ್ಗಾಮ್ ದಾಳಿ ಪ್ರಕರಣಕ್ಕೂ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಎನ್ಐಎ ವಿಶೇಷ ನ್ಯಾಯಾಲಯ ಈತನ ವಿರುದ್ಧ ಪ್ರಕಟಣಾ ನೋಟಿಸ್ ಹೊರಡಿಸಿತ್ತು.
ಕ್ಯಾಮೆರಾದಲ್ಲಿ ಸೆರೆಯಾದ ಚಲನವಲನ
ಶುಕ್ರವಾರ ತಡರಾತ್ರಿ ಈ ಇಬ್ಬರು ಉಗ್ರರ ಚಲನವಲನಗಳು ಭದ್ರತಾ ಪಡೆಗಳ ನಿಗಾ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಶನಿವಾರ ಬೆಳಗ್ಗೆ ಸೇನಾ ಪಡೆಗಳು ಸಮೀಪಿಸುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿ ತೋಟದೊಳಗೆ ಅಡಗಿಕೊಂಡಿದ್ದಾರೆ.
ಉಗ್ರರು ದಟ್ಟ ತೋಟಗಳನ್ನು ಆಶ್ರಯವಾಗಿ ಬಳಸುತ್ತಿರುವ ಹಿನ್ನೆಲೆಯಲ್ಲಿ ಸೇನೆಯ ‘ವಿಕ್ಟರ್ ಫೋರ್ಸ್’ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ರಾತ್ರಿ ವೇಳೆಯಲ್ಲಿಯೂ ಕಾರ್ಯಾಚರಣೆ ಮುಂದುವರಿದಿದ್ದು, ಹೈ-ಪವರ್ ಲೈಟ್ಗಳು, ಥರ್ಮಲ್ ಇಮೇಜಿಂಗ್ ಸಾಧನಗಳು ಹಾಗೂ ಡ್ರೋನ್ಗಳ ಮೂಲಕ ಇಡೀ ಪ್ರದೇಶದ ಮೇಲೆ ನಿಗಾ ಇಡಲಾಗಿದೆ.
ಇಂಟರ್ನೆಟ್ ಸೇವೆ ತಾತ್ಕಾಲಿಕ ಸ್ಥಗಿತ
ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಹಾಗೂ ಉಗ್ರರಿಗೆ ಯಾವುದೇ ಮಾಹಿತಿ ರವಾನೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಶೋಪಿಯಾನ್ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದಕ್ಷಿಣ ಕಾಶ್ಮೀರವನ್ನು ಮಧ್ಯ ಕಾಶ್ಮೀರದೊಂದಿಗೆ ಸಂಪರ್ಕಿಸುವ ಪ್ರಮುಖ ಕಾರಿಡಾರ್ ಆಗಿರುವ ಶೋಪಿಯಾನ್ನಲ್ಲಿ ಜಕೀರ್ ಅಹ್ಮದ್ ಗಣೈನಂತಹ ಉನ್ನತ ಮಟ್ಟದ ಉಗ್ರನನ್ನು ನಿಷ್ಕ್ರಿಯಗೊಳಿಸುವುದು ಉಗ್ರರ ಜಾಲಕ್ಕೆ ದೊಡ್ಡ ಹೊಡೆತವಾಗಲಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

















