ಕೃತಿ ಕೈಲಾರ್‌ಗೆ ದೂರದರ್ಶನ ‘ಬಿ’ ಗ್ರೇಡ್ ಕಲಾವಿದೆಯ ಗರಿ

ಉಪ್ಪಿನಂಗಡಿ: ಭರತನಾಟ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಉಪ್ಪಿನಂಗಡಿಯ ಬಹುಮುಖ ಪ್ರತಿಭೆ ಕೃತಿ ಕೈಲಾರ್ ಅವರಿಗೆ ಪ್ರಸಾರ ಭಾರತಿ ದೂರದರ್ಶನದಿಂದ ‘ಬಿ’ ಗ್ರೇಡ್ ಕಲಾವಿದೆಯಾಗಿ ಮಾನ್ಯತೆ ದೊರೆತಿದೆ.

ಉಪ್ಪಿನಂಗಡಿಯ ಕೈಲಾರ್ ರಾಜ ಗೋಪಾಲ ಭಟ್ ಮತ್ತು ಸತ್ಯೇಶ್ವರಿ ದಂಪತಿ ಪುತ್ರಿಯಾಗಿರುವ ಈಕೆ ಭರತ ನಾಟ್ಯ ಶಾಸ್ತ್ರ ಪ್ರವೀಣೆಯಾಗಿದ್ದು, ವಿವಿಧ ವೇದಿಕೆಗಳಲ್ಲಿ ತನ್ನ ನೃತ್ಯ ಪ್ರದರ್ಶನದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಬಾಲ್ಯದಿಂದಲೇ ನೃತ್ಯ ಮಾತ್ರವಲ್ಲದೇ ಸಂಗೀತ, ಕ್ರೀಡೆ, ಯೋಗಾಸನ, ಓದು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿರುವ ಬಹುಮುಖ ಪ್ರತಿಭೆ ಕೃತಿ ಕೈಲಾರ್, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಹಳೆ ವಿದ್ಯಾರ್ಥಿಯೂ ಹೌದು.

ಈಕೆಯ ಭರತನಾಟ್ಯ ಪ್ರಾವೀಣ್ಯತೆಯನ್ನು ಕಂಡ ಪ್ರಸಾರ ಭಾರತಿಯ ಆಯ್ಕೆ ಸಮಿತಿಯು ದೂರದರ್ಶನದಲ್ಲಿ ಕಾರ್ಯಕ್ರಮ ನೀಡುವ ನಿಟ್ಟಿನಲ್ಲಿ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆ ಮಾಡಿದೆ.

ಪ್ರಸ್ತುತ ಮೈಸೂರು ಜೆಎಸ್‌ಎಸ್ ಕಾನೂನು ಕಾಲೇಜಿನ ಅಂತಿಮ ವರ್ಷದ ಬಿಬಿಎಎಲ್‌ಎಲ್‌ಬಿ ವಿದ್ಯಾರ್ಥಿನಿ ಯಾಗಿದ್ದು, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಹಾಗೂ ವಿದುಷಿ ಸುಹಾಸಿನಿ ಕೌಲಗಿ ಮಾರ್ಗದರ್ಶನದಲ್ಲಿನೃತ್ಯಾಭ್ಯಾಸ ನಡೆಸುತ್ತಿದ್ದಾರೆ.