ಮಾಹೆ ಆನ್‌ಲೈನ್ ಶಿಕ್ಷಣದ 3ನೇ ಘಟಿಕೋತ್ಸವ: ಸೀಮಾತೀತ ಶಿಕ್ಷಣದ ಹೊಸ ಅಲೆ, ಭವಿಷ್ಯಕ್ಕೆ ಸಜ್ಜಾದ ವಿದ್ಯಾರ್ಥಿಗಳು

ಮಂಗಳೂರು, ಮೇ 16, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು
ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ 3ನೇ ಘಟಿಕೋತ್ಸವ ಯಶಸ್ವಿಯಾಗಿ
ಜರುಗಿತು. ಮಾಹೆಯ ಡಿಜಿಟಲ್ ಶಿಕ್ಷಣದ ಬೆಳವಣಿಗೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದ್ದು, ಆನ್‌ಲೈನ್‌ ಮೂಲಕ
ಶಿಕ್ಷಣ ಪಡೆದ ದೇಶ-ವಿದೇಶದ ವಿದ್ಯಾರ್ಥಿಗಳ ಸಾಧನೆಯನ್ನು ಇಲ್ಲಿ ಸಂಭ್ರಮಿಸಲಾಗಿತು.
2020ರಲ್ಲಿ ಆರಂಭವಾದ ಮಾಹೆಯ ಈ ಆನ್‌ಲೈನ್ ಶಿಕ್ಷಣ ವಿಭಾಗವು ಇಂದು ಬರೋಬ್ಬರಿ 59 ದೇಶಗಳಿಗೆ ವಿಸ್ತರಿಸಿದೆ. ಪ್ರಸ್ತುತ, ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ರೂಪಿಸಲಾದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು ಸೇರಿದಂತೆ ಒಟ್ಟು 13,694ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀ ಎಸ್. ನಾಯರ್, “ಇಂದಿನ ಆಧುನಿಕ ಯುಗದಲ್ಲಿ ಜ್ಞಾನಾರ್ಜನೆಯನ್ನು ಅತ್ಯಂತ ಸುಲಭ ಹಾಗೂ ಎಲ್ಲರಿಗೂ ತಲುಪುವಂತೆ ಆನ್‌ಲೈನ್ ಶಿಕ್ಷಣ ಮಾಡಿದೆ. ಹಳ್ಳಿಯ ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಸ್ಥರವರೆಗೆ ಎಲ್ಲರೂ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜವಾಬ್ದಾರಿಗಳ ನಡುವೆಯೇ ಉನ್ನತ ಶಿಕ್ಷಣ ಪಡೆಯಲು ಇದು ನೆರವಾಗಿದೆ. ಮಾಹೆಯು ತಂತ್ರಜ್ಞಾನದ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಜಾಗತಿಕ ವೇದಿಕೆಯನ್ನು ಯಶಸ್ವಿಯಾಗಿ ಸೃಷ್ಟಿಸಿದೆʼ ಎಂದು ಶ್ಲಾಘಿಸಿದರು.
ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ನಿರಂತರ ಕಲಿಕೆ ಮತ್ತು ಬದಲಾವಣೆಗೆ ಒಗ್ಗಿಕೊಳ್ಳುವ ಗುಣವನ್ನು ರೂಢಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯುನೆಕ್ಸ್ಟ್ ಲರ್ನಿಂಗ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಬರೀಶ್ ಸಿನ್ಹಾ ಅವರು, “ಇಂದಿನ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ಆನ್‌ಲೈನ್ ಶಿಕ್ಷಣವು ಹಂತಹಂತವಾಗಿ ಬದಲಾಯಿಸಿದೆ. ಉದ್ಯೋಗ, ವೈಯಕ್ತಿಕ ಜವಾಬ್ದಾರಿಗಳ ಕಾರಣದಿಂದ ಊರು ಬಿಟ್ಟು ಹೋಗಲು ಆಗದವರಿಗೂ ತಾವಿದ್ದಲ್ಲೇ ಗುಣಮಟ್ಟದ ಶಿಕ್ಷಣ ಸುಲಭವಾಗಿ ಸಿಗುತ್ತಿರುವುದು ದೊಡ್ಡ ಬದಲಾವಣೆ. ಇಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ವಯಂ ಕಲಿಕೆಯನ್ನು ಶಿಸ್ತು ಮತ್ತು ದೃಢಸಂಕಲ್ಪದಿಂದ ಅಳವಡಿಸಿಕೊಂಡಿದ್ದಾರೆ. ಉದ್ಯೋಗ ಮಾರುಕಟ್ಟೆ ಹಾಗೂ ಕೌಶಲ್ಯಗಳ ಅಗತ್ಯತೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಜಗತ್ತಿನಲ್ಲಿ, ಸದಾ ಹೊಸದನ್ನು ಕಲಿಯುವ ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಗುಣವೇ ನಿಮ್ಮ ದೊಡ್ಡ ಶಕ್ತಿಯಾಗಲಿದೆ. ಇಲ್ಲಿ ನೀವು ಪಡೆದ ಶಿಕ್ಷಣ ಮತ್ತು ಅನುಭವಗಳು ನಿಮ್ಮ ಭವಿಷ್ಯವನ್ನು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಲು ಸಹಾಯ ಮಾಡಲಿವೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಅವರು, “ಇಂದು ಉನ್ನತ ಶಿಕ್ಷಣ ಕ್ಷೇತ್ರವು ದೊಡ್ಡ ಬದಲಾವಣೆಯನ್ನು ಕಾಣುತ್ತಿದೆ. ಎಲ್ಲ ವರ್ಗದ ಹಾಗೂ ಎಲ್ಲಾ ಭಾಗದ ಜನರಿಗೂ ಗುಣಮಟ್ಟದ ಶಿಕ್ಷಣ ತಲುಪಿಸುವಲ್ಲಿ ಆನ್‌ಲೈನ್ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿದೆ. ಆನ್‌ಲೈನ್ ಶಿಕ್ಷಣ ಎಂಬುದು ಈಗ ಕೇವಲ ಪರ್ಯಾಯ ಮಾರ್ಗವಾಗಿ ಉಳಿದಿಲ್ಲ, ಬದಲಿಗೆ ಅದು ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಭವಿಷ್ಯದ ಒಂದು ಪ್ರಮುಖ ಭಾಗವಾಗಿದೆ. ಕಟ್ಟುನಿಟ್ಟಾದ ಪಠ್ಯಕ್ರಮ, ಸುಲಭ ಕಲಿಕಾ ವ್ಯವಸ್ಥೆ, ಉದ್ಯೋಗಕ್ಕೆ ಬೇಕಾದ ಕೌಶಲ್ಯ ಹಾಗೂ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಅತ್ಯುತ್ತಮ ಆನ್‌ಲೈನ್ ಶಿಕ್ಷಣ ಮಾದರಿಯನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಇದು ಜಗತ್ತಿನಾದ್ಯಂತ ಇರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ” ಎಂದು ಆಶಯ ವ್ಯಕ್ತಪಡಿಸಿದರು.
ಮಾಹೆಯ ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಮನೋಜ್‌ಕುಮಾರ್ ನಾಗಸಂಪಿಗೆ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು.
ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್ ಅವರು ಸ್ವಾಗತಿಸಿದರು. ಮಾಹೆಯ ರಿಜಿಸ್ಟ್ರಾರ್ ಡಾ. ಪಿ. ಗಿರಿಧರ್ ಕಿಣಿ ವಂದನಾರ್ಪಣೆ ಮಾಡಿದರು. ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್ ಹಾಗೂ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ವಿನೋದ್ ವಿ. ಥಾಮಸ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಳೆದ ಕೆಲವು ವರ್ಷಗಳಿಂದ ಮಾಹೆಯು ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ತನ್ನ ಆನ್‌ಲೈನ್ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಇಂದಿನ ಉದ್ಯೋಗ ಮಾರುಕಟ್ಟೆಗೆ ನೇರವಾಗಿ ನೆರವಾಗುವಂತಹ ಪಠ್ಯಕ್ರಮ, ವಿದ್ಯಾರ್ಥಿವೇತನ ಹಾಗೂ ವಿದ್ಯಾರ್ಥಿಗಳು ನೇರವಾಗಿ ಕ್ಯಾಂಪಸ್‌ಗೆ ಬಂದು ಕಲಿಯುವ ವಿಶೇಷ ಅವಕಾಶಗಳನ್ನು ಒದಗಿಸುವ ಮೂಲಕ ಮಾಹೆಯು ಒಂದು ಅತ್ಯುತ್ತಮ ಆನ್‌ಲೈನ್‌ ಕಲಿಕಾ ವಾತಾವರಣವನ್ನು ಸೃಷ್ಟಿಸುತ್ತಿದೆ.