ಉಡುಪಿ: ಇಲ್ಲಿನ ಕೊರಂಗ್ರಪಾಡಿ ಎಂಬಲ್ಲಿ ಮನೆ ಸಮೀಪದ ಬಾವಿ ಸ್ವಚ್ಚತೆಗೆ ಇಳಿದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ವ್ಯಕ್ತಿಯೊಬ್ಬರನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.
ಕೊರಂಗ್ರಪಾಡಿಯ ಬಲ್ಲಾಳ್ ಕಂಪೌಂಡ್ ನಿವಾಸಿ ಶ್ರೀಶ ಬಲ್ಲಾಳ್ (60) ರಕ್ಷಿಸಲ್ಪಟ್ಟವರು. ಶ್ರೀಶ ಅವರು ಇಂದು ಬೆಳಗ್ಗೆ ಮನೆ ಸಮೀಪದ ಸುಮಾರು 35 ಅಡಿ ಆಳದ ಬಾವಿಗೆ ಸ್ವಚ್ಚತೆಗೆಂದು ಇಳಿದಿದ್ದರು.

ಈ ವೇಳೆ ಬಾವಿಯಿಂದ ಮೇಲೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿದ್ದರು. ಮನೆ ಮಂದಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಡುಪಿ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಶ್ರೀಶ ಬಲ್ಲಾಳ್ ಅವರನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸತೀಶ್, ಅಶ್ವಿನ್ ಸನಿಲ್, ಮಹಾಬಲೇಶ್ವರ್ ಹರಿಕಾಂತ್, ಭರತ್ ಎನ್, ಸಂತೋಷ್ ಶೆಟ್ಟಿ, ಅಮರ್ ಕಟ್ಟಿ, ರಾಕೇಶ್ ಮೊದಲಾದವರು ಸಹಕರಿಸಿದ್ದಾರೆ.


















