ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ಉಪಾಧ್ಯಕ್ಷರಾಗಿ ಹೆಬ್ರಿ ವಲಯ ಉದಯವಾಣಿ ವರದಿಗಾರ ಹೆಬ್ರಿ ಉದಯ್ ಕುಮಾರ್ ಶೆಟ್ಟಿ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮದ ವಿವಿಧ ವಿಭಾಗದಲ್ಲಿ 23 ವರ್ಷಗಳ ಅನುಭವ ಇರುವ ಉದಯ್ ಕುಮಾರ್ ಶೆಟ್ಟಿ ಅವರು ಕಳೆದ 10 ವರ್ಷಗಳಿಂದ ಉದಯವಾಣಿ ಪತ್ರಿಕೆಯ ವರದಿಗಾರರಾಗಿ ಪ್ರಾಮಾಣಿಕ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಜಿಲ್ಲಾ ಸಂಘದಲ್ಲಿ 6 ವರ್ಷಗಳ ಕಾಲ ಕಾರ್ಯಕಾರಿ ಸಮಿತಿಯ ಸದಸ್ಯ ಅವಧಿಯಲ್ಲಿ 3 ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಪತ್ರಿಕೋದ್ಯಮದ ಜೊತೆ ತನ್ನದೇ ಆದ ಶಿಕ್ಷಣ ಸಂಸ್ಥೆಯನ್ನು ಒಂದನ್ನು ಸ್ಥಾಪಿಸಿ ಶಿಕ್ಷಣದ ಜೊತೆ ವಿವಿಧ ಕಲಾಪಕರಗಳ ತರಬೇತಿಯನ್ನು ನೀಡಿ ನೂರಾರು ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡು ಹೋಗುವಲ್ಲಿ ಇವರ ಪ್ರಯತ್ನ ಶ್ಲಾಘನೀಯ. ಬೇರೆ ಬೇರೆ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿ ನಡೆಸಿ ಅವರನ್ನು ತೇರ್ಗಡೆ ಗೊಳಿಸಿದಷ್ಟೇ ಅಲ್ಲದೆ ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ವಿಶೇಷ ಶ್ರಮವಹಿಸಿದ್ದಾರೆ.
ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ವರ್ಷಗಳ ಕಾಲ ಶಾಲಾ ಕಾಲೇಜುಗಳಲ್ಲಿ ಉಚಿತ ಕನ್ನಡ ಗೀತಾ ಗಾಯನ ಕಾರ್ಯಕ್ರಮ ಮಾಡುವ ಮೂಲಕ ರಾಜ್ಯದಲ್ಲೇ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಾರ ನವೋದಯ ವಿದ್ಯಾಲಯದ ಪೋಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ವಿದ್ಯಾರ್ಥಿಗಳ ಬಿಸಿನೀರಿನ ಸ್ಥಾನದ ವ್ಯವಸ್ಥೆಗೆ ಶಾಶ್ವತ ಪರಿಹಾರವನ್ನು ಕಲ್ಪಿಸಿ ಶಾಲೆಯ ಅಭಿವೃದ್ಧಿಯಲ್ಲಿ ವಿಶೇಷ ಶ್ರಮವಹಿಸಿದ್ದಾರೆ.
ಹೆಬ್ರಿ ಬಂಟರ ಸಂಘ, ಜೆ ಸಿ ಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಇವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸುದ್ದಿ ಲೇಖನದ ಮೂಲಕ ಹಲವಾರು ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಶ್ರಮವಹಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಬಗ್ಗೆ ತರಬೇತಿ ನೀಡಿ ಸುದ್ದಿ ಬರವಣಿಗೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುತ್ತಿದ್ದಾರೆ.

















