ಕಾರ್ಕಳ ಬಿಜೆಪಿ ಎಸ್ಟಿ ಮೋರ್ಚಾದಿಂದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ 145ನೇ ಜಯಂತಿ ಆಚರಣೆ

ಕಾರ್ಕಳ: ಕಾರ್ಕಳ ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಬುಡಕಟ್ಟು ಸಮುದಾಯದ ನಾಯಕ ಭಗವಾನ್ ಬಿರ್ಸಾ ಮುಂಡಾ 145 ನೇ ಜನ್ಮಜಯಂತಿ ನವೆಂಬರ್ 22ರಂದು ವಿಕಾಸ ಶಾಸಕರ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.

ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ಬಿರ್ಸಾ ಮುಂಡಾ ಅತ್ಯಂತ ಪರಿಣಾಮಕಾರಿಯಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿದ ಮಹಾನ್ ನಾಯಕ. ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಈತ ಮೊದಲಿಗ. 25 ವರ್ಷ ಕಾಲ ಬದುಕಿದರೂ ಆತನ ಜೀವಿತಾವಧಿಯಲ್ಲಿ ಮಾಡಿದ ಸಾಧನೆಗಳನ್ನು ನೆನಪಿಸಿಕೊಂಡಾಗ ಆಶ್ಚರ್ಯ ಮತ್ತು ರೋಮಾಂಚನವಾಗುತ್ತದೆ. ಈತನ ಹೋರಾಟದ ಎಲ್ಲಾ ಮಜಲುಗಳು ಇಂದಿನ ಪೀಳಿಗೆಗೆ ಪ್ರೇರಣೆ ಆಗಬೇಕಿದೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಬ್ರಿಟಿಷ್ ವಿರುದ್ಧ ಹೋರಾಡಿ ಅರಣ್ಯವಾಸಿಗಳಿಗೆ ನ್ಯಾಯ ದೊರಕಿಸಿಕೊಟ್ಟಂತಹ ವೀರ ಹೋರಾಟಗಾರ ಬಿರ್ಸಾ ಮುಂಡ. ಬಿರ್ಸಾ ಹೋರಾಟಗಳು ಈಗಿನ ಬುಡಕಟ್ಟು ಆದಿವಾಸಿಗಳಿಗೆ ಪ್ರೇರಣೆ ಆಗಬೇಕಿದೆ. ಈ ದೇಶದ ಸಂಸ್ಕೃತಿ, ಸಂಸ್ಕಾರಗಳು ಬುಡಕಟ್ಟುಗಳಿಂದ ಅನ್ನುವಂತದ್ದನ್ನು ಮರೆಯುವಂತಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಬಿರ್ಸಾ ಮುಂಡಾ ಎಂದರು.
ಈ ಸಂದರ್ಭದಲ್ಲಿ ಕೇರಳ ರಾಜ್ಯದ ಸಹ ಪ್ರಭಾರಿಯಾಗಿ ಆಯ್ಕೆಯಾದ ಶಾಸಕ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ಜಯರಾಮ ಸಾಲಿಯಾನ್ ಹಾಗೂ ನವೀನ್ ನಾಯಕ್, ಎಸ್ ಟಿ ಮೋರ್ಚಾದ ಅಧ್ಯಕ್ಷ ಕೆ.ಪಿ. ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ದಿವ್ಯ ಗಿರೀಶ್ ಆಮೀನ್, ರೇಶ್ಮಾ ಉದಯ ಶೆಟ್ಟಿ ಹಾಗೂ ಎಸ್ ಟಿ ಮೋರ್ಚಾದ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಡಲದ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಪ್ರಶಾಂತ್ ಹೆರ್ಮುಂಡೆ ಸ್ವಾಗತಿಸಿದರು, ಜಿಲ್ಲಾ ಎಸ್ ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀಧರ ಗೌಡ ಪ್ರಸ್ತಾವನೆಗೈದರು. ಮಂಡಲದ ಎಸ್ ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಎಸ್ ಟಿ ಮೋರ್ಚಾದ ಕಾರ್ಯದರ್ಶಿ ಪುತ್ರನ್ ವಂದಿಸಿದರು.