ಮುರುಡೇಶ್ವರದಲ್ಲಿ ರಾಜ್ಯದ ಎರಡನೇ ತೇಲುವ ಸೇತುವೆ ನಿರ್ಮಾಣ; 130 ಮೀಟರ್ ಉದ್ದದ ಸೇತುವೆಯಿಂದ ಶಿವನ ಅಪೂರ್ವ ನೋಟ!!

ಉ.ಕ: ರಾಜ್ಯದ ಎರಡನೇ ಮತ್ತು ದೇಶದ ಮೂರನೇ ತೇಲುವ ಸೇತುವೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಿರ್ಮಾಣಗೊಂಡಿದ್ದು, 130 ಮೀಟರ್ ಉದ್ದದ ಈ ಸೇತುವೆಯು ಸಮುದ್ರದ ಮಧ್ಯದಿಂದ ಶಿವನ ಬೃಹತ್ ಪ್ರತಿಮೆ ಮತ್ತು ಮುರುಡೇಶ್ವರ ದೇವಾಲಯವನ್ನು ಕಾಣುವ ಅವಕಾಶವನ್ನು ನೀಡಲಿದೆ.

ದೇಶದಲ್ಲಿ ಇದು ಮೂರನೇ ತೇಲುವ ಸೇತುವೆಯಾಗಿದ್ದು, ಇನ್ನೆರಡು ಮಲ್ಪೆ ಮತ್ತು ಕೇರಳದಲ್ಲಿವೆ ಎಂದು ಓಷನ್ ಅಡ್ವೆಂಚರ್‌ನ ಸಂಸ್ಥಾಪಕ ಮತ್ತು ಮುಖ್ಯಸ್ಥ ಗಣೇಶ ಹರಿಕಂತ್ರ ಟಿಎನ್ಐಇಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸೇತುವೆ ನಿರ್ಮಾಣಕ್ಕೆ ಮೂರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ನಾವು 2019ರಲ್ಲಿ ತೇಲುವ ಸೇತುವೆ ಬಗ್ಗೆ ಯೋಚಿಸಿದ್ದೆವು. ಆದರೆ, ಕೋವಿಡ್-19 ಉಲ್ಬಣವು ಈ ಆಲೋಚನೆಯನ್ನು ಕೈಬಿಡುವಂತೆ ಮಾಡಿತ್ತು. ಇದೀಗ, ದೋಣಿಗಳಲ್ಲಿ ಸಮುದ್ರಕ್ಕೆ ಹೋಗಲು ಹೆದರುವವರಿಗೆ ತೇಲುವ ಸೇತುವೆ ನೆರವಾಗಲಿದೆ ಎಂದು ಗಣೇಶ್ ಹೇಳಿದ್ದಾರೆ.

ಸೇತುವೆಯು ಸಮುದ್ರ ಮತ್ತು ದೇವಾಲಯದ ಸ್ಪಷ್ಟ ನೋಟವನ್ನು ಒದಗಿಸುವ ದೃಷ್ಟಿಕೋನವನ್ನು ಹೊಂದಿದೆ. ಸೂರ್ಯಾಸ್ತವನ್ನು ನೋಡಲು ಬಯಸುವವರು ಇದನ್ನು ಬಳಸಿ ನೋಡಬಹುದು. ಈ ಸೇತುವೆಯು ಏಕಕಾಲದಲ್ಲಿ 110 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, 100 ಪ್ರವಾಸಿಗರೊಂದಿಗೆ 10 ಜೀವರಕ್ಷಕರು ಇರುತ್ತಾರೆ. ಇದು ಸರ್ವಋತುವಿಗೂ ಹೊಂದುವ ಸೇತುವೆಯಾಗಿರುವುದರಿಂದ ಸಮುದ್ರದ ಪ್ರಕ್ಷುಬ್ಧತೆಯ ದಿನಗಳಲ್ಲಿಯೂ ಇದು ಬೇರ್ಪಡದೆ ಉಳಿಯುತ್ತದೆ’ ಎಂದು ಗಣೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.