“ದೇಶದ ಅಭಿವೃದ್ಧಿಯ ಹರಿಕಾರರಾಗೋಣ” – ನಿಟ್ಟೆಯಲ್ಲಿ ಶ್ರೀ ದೀಪಕ್ ವೋರಾ ಅವರ ಅತಿಥಿ ಉಪನ್ಯಾಸ

ಕಾರ್ಕಳ: ನಮ್ಮ ದೇಶವು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಇದು ಸರ್ವರ ಕಠಿಣ ಪರಿಶ್ರಮ, ದೂರದರ್ಶಿತ್ವ ಚಿಂತನೆ, ಉತ್ತಮ ನಾಯಕತ್ವ ಮತ್ತು ಸಕಾಲಿಕ ನಿರ್ಣಯಗಳಿಂದ ಸಾಧ್ಯವಾಗಿದೆ.

ವಿದೇಶಿ ವಿನಿಮಯ ಯೋಜನೆ, ವಿಶ್ವ ದರ್ಜೆಯ ಅಧೋರಚನೆ, ಅತ್ಯುತ್ತಮ ಶಿಕ್ಷಣ ನಮ್ಮ ದೇಶವನ್ನು ಇಂದು ಬಲಿಷ್ಠ ಶಕ್ತಿಯನ್ನಾಗಿಸಿದೆ.

ನಮ್ಮ ದೇಶದ ನಾಗರೀಕತೆ ಇತಿಹಾಸದಲ್ಲಿ ಆರ್ಥಿಕ -ಮಿತ್ರತ್ವವನ್ನು ಸೃಷ್ಟಿಸಿದೆ. ಹಿಂದಿನ ವ್ಯವಸ್ಥೆ ಹಿಂದಕ್ಕೆ ಸರಿದು ಹೊಸ ಬದಲೀ ವ್ಯವಸ್ಥೆಯನ್ನು ನಾವು ಎಲ್ಲೆಂದರಲ್ಲಿ ಕಾಣುತ್ತಿದ್ದೇವೆ.

ಜಗತ್ತಿನ ಅತ್ಯಂತ ದೊಡ್ಡ ಸ್ಟಾರ್ಟ್ ಅಪ್ ಕೇಂದ್ರ ಭಾರತ. ಪ್ರತಿ ಕ್ಷೇತ್ರಗಳೂ ಚೇತೋಹಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಭಿವೃದ್ಧಿ ‘ಹೊಸ ಭಾರತ’ವನ್ನು ನಿರ್ಮಿಸಿರುವುದು ಭಾರತೀಯರ, ಮನೋಸ್ಥರ್ಯ, ಚಿಂತನಾ ಕ್ರಮಕ್ಕೆಹಿಡಿದ ಸಾಕ್ಷಿ ಎಂದು ಭಾರತ ಸರಕಾರದ ನಿವೃತ್ತ ಖ್ಯಾತ ರಾಜತಾಂತ್ರಿಕರೂ, ಪ್ರಸಿದ್ಧ ಪ್ರೇರಣಾ ನಾಯಕರೂ ಆದ ದೀಪಕ್ ವೋರಾ ಅಭಿಪ್ರಾಯಪಟ್ಟರು.

ಅವರು ನಿಟ್ಟೆಯ ಜಸ್ಟೀಸ್ ಕೆ. ಎಸ್ ಹೆಗ್ಡೆ (ಎಂ.ಬಿ.ಎ) ಉದ್ಯಮಾಡಳಿತ ಸಂಸ್ಥೆಯಲ್ಲಿ “ವಿಕಸಿತ ಭಾರತ 2047-ಅಮೃತಕಾಲದತ್ತ” ಅನ್ನುವ ವಿಷಯದ ಕುರಿತು ಅಂಕಿ-ಅಂಶಗಳ ಮತ್ತು ಸಂಶೋಧನಾ ಆಧಾರಿತ ಉಪನ್ಯಾಸಗೈದರು. ವಿಕಸಿತ ಭಾರತದ ವಿಶನ್ ಹೇಳಿಕೆಗೆ ಸಂಬಂಧಿಸಿ ಪುರಾವೆ ಮತ್ತು ಉದಾಹರಣೆಗಳನ್ನು ವೋರಾ ಅವರು ಒದಗಿಸಿದರು.

ಸಂಸ್ಥೆಯ ನಿರ್ದೇಶಕರಾದ ಡಾ. ಗುರುರಾಜ್ ಎಚ್ ಕಿದಿಯೂರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿಧಾನಪರಿಷತ್ ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂಯೋಜನೆಗೊಳಿಸಿ, ಸಂಸ್ಥೆಯ ಪ್ರಾಧ್ಯಾಪಕ ಡಾ| ಸುಧೀರ್ ರಾಜ್ ಕೆ ನಿರೂಪಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು, ಪ್ರಾಧ್ಯಾಪಕ ವೃಂದ, ಸಹ ಸಂಸ್ಥೆಗಳ ಪ್ರಾಂಶುಪಾಲರು ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.