ರೋಟರಿ ಮಣಿಪಾಲ ಟೌನ್ ಪದ ಪ್ರದಾನ ಸಮಾರಂಭ

ಮಣಿಪಾಲ: ರೋಟರಿ ಕ್ಲಬ್ ಮಣಿಪಾಲ ಟೌನ್ ಇದರ 2024-25 ರ ಸಾಲಿನ ನೂತನ ಅಧ್ಯಕ್ಷರಾಗಿ ಡಾ.ಮನೋಜ್ ಕುಮಾರ್, ನಾಗಸಂಪಿಗೆ ಕಾರ್ಯದರ್ಶಿಯಾಗಿ ಡಾ.ನವೀನ್ ಕುಮಾರ್ ಕೊಡಮರ ಇವರಿಗೆ ಜು.9 ರಂದು ಶಾರದ ಸಭಾಂಗಣ ಎಂ.ಸಿ.ಹೆಚ್.ಪಿ ಮಣಿಪಾಲದಲ್ಲಿ ರೋಟರಿ ಮಾಜಿ ಗವರ್ನರ್ ಮೇಜರ್ ಡೋನರ್ ಬಿ.ಎನ್ ರಮೇಶ್ ಪದ ಪ್ರದಾನಗೈದರು.

ಸಮಾಜ ಸೇವೆ, ಸಾಮಾಜಿಕ ಜಾಗೃತಿ, ಆರೋಗ್ಯ, ಶಿಕ್ಷಣ, ಪರಿಸರ ಇದರ ಬಗ್ಗೆ ಕಾಳಜಿ, ಅರಿವು ಸಹಕಾರ ಇಂತಹ ಮನುಕುಲದ ಸೇವೆಗೈಯುವಲ್ಲಿ ರೋಟರಿಯ ಪಾತ್ರ ಮಹತ್ವವಾಗಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಮಾಹೆಯು ಸಿ.ಓ.ಓ ಡಾ.ರವಿರಾಜ್ ಎನ್.ಎಸ್ ಮಾತನಾಡಿ ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಾಹೆ ಒಂದೇ ನಾಣ್ಯದ ಎರಡು ಮುಖದಂತೆ ಕೆಲಸ ಮಾಡುತ್ತಿವೆ. ಈ ಸಂಸ್ಥೆಗಳು ಸೇರಿ ಸ್ಕಿನ್ ಬ್ಯಾಂಕ್, ಚೈಲ್ಡ್ ಕ್ಯಾನ್ಸರ್ ಎಂಡೋಮೆಂಟ್ ಫಂಡ್ ಆರೋಗ್ಯದ ಬಗ್ಗೆ ಮ್ಯಾರಥಾನ್ ನಂತಹ ಮಹತ್ ಕಾರ್ಯಗಳು ಮೂಡಿ ಬಂದಿರುವುದು ಹಾಗೂ ಕ್ಲಬ್ ನಡೆಸುತ್ತಿರುವ ಕಾರ್ಯವನ್ನು ಶ್ಲಾಘಿಸಿ ಶುಭಕೋರಿದರು, ಕಾರ್ಯಕ್ರಮದಲ್ಲಿ ರೋಟರಿ ವಲಯ 4ರ ಸಹಾಯಕ ಗವರ್ನರ್ ಜಗನ್ನಾಥ ಕೋಟೆ, ವಲಯ ಸೇನಾನಿ ನಾಗರಾಜ ಶೆಟ್ಟಿ ಉಪಸ್ಥಿತರಿದ್ದು, ಕ್ಲಬ್‍ನ ಸೇವೆಯನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕ್ಲಬ್ ಈ ವರ್ಷ ದಶಮಾನೋತ್ಸವವನ್ನು ಆಚರಿಸುತ್ತಿದ್ದು,ಈ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಕ್ಲಬ್‍ಗೆ ಸಹಕಾರವಿತ್ತ ಎಲ್ಲರ ಸೇವೆ ಸ್ಮರಿಸಿ ಗೌರವಿಸಲಾಯಿತು.

ಕ್ಲಬ್‍ನ ಒಂದು ವರ್ಷದ ಚಟುವಟಿಕಾ ವರದಿಯನ್ನು ನಿರ್ಗಮನ ಕಾರ್ಯದರ್ಶಿ ಡಾ.ದೀಪಕ್ ರಾಮ್ ಬಾಯರಿ ಮಂಡಿಸಿ, ನಿರ್ಗಮನ ಅಧ್ಯಕ್ಷರಾದ ಶ್ರೀಧರ್ ಹೆಚ್‍ರವರು ಸ್ವಾಗತಿಸಿ ಒಂದು ವರ್ಷದ ಕಾರ್ಯಕ್ಕೆ ಸಹಕರಿಸಿದವರೆಲ್ಲರನ್ನು ಸ್ಮರಿಸಿ ಅಭಿನಂದಿಸಿದರು.

ಈ ಶುಭ ಸಂದರ್ಭದಲ್ಲಿ ರೋಟರಿ ಸೇವಾಕಾರ್ಯಕ್ಕೆ ಸಹಕಾರಿಯಾಗಿ ಮಾಜಿ ಅಧ್ಯಕ್ಷರು ಶ್ರೀ ಗಣೇಶ್ ನಾಯಕ್ ಮನೆಕಟ್ಟುವ ಬಡ ಕುಟುಂಬಕ್ಕೆ ರೂ.3 ಲಕ್ಷದ ಮೊತ್ತ ನೀಡಿದರು ಹಾಗೂ ಶೋಭಾ ನಾಗಸಂಪಿಗೆ ರವರು 4 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಸಹಕಾರವಿತ್ತರು.

ಶ್ರೀಮತಿ ಪಾವನಗಂಗಾ ರವರು ಪ್ರಾರ್ಥಿಸಿ, ನೂತನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ವಂದಿಸಿದರು, ನಿತ್ಯಾನಂದ ನಾಯಕ್ ನರಸಿಂಗೆ ಕಾರ್ಯಕ್ರಮ ನಿರೂಪಿಸಿದರು.