ನಿರಂತರ ಕಲಿಕೆಯಿಂದ ಕೌಶಲ್ಯ ವೃದ್ಧಿ: ಡಾ. ಭಾಸ್ಕರ್ ಶೆಟ್ಟಿ

ಉಡುಪಿ: ರಂಗ ಅಭಿನಯ, ಅಭಿನಯ ಕಲೆ, ರಂಗ ಕೌಶಲ್ಯಗಳಿಗೆ ನಿಕಟವಾದ ಸಂಬಂಧವಿದ್ದು, ಜಾಗತೀಕರಣ ಮತ್ತು ಜಾಗತೀಕರಣೋತ್ತರ ಸಂದರ್ಭದ ಪ್ರಪಂಚದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೌಶಲ್ಯಗಳಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಕಲಿಕೆ ನಿಂತ ನೀರಾಗಬಾರದು, ನಿರಂತರವಾಗಿದ್ದರೆ ಮಾತ್ರ ಕೌಶಲ್ಯವನ್ನು ಗಳಿಸಲು ಸಾಧ್ಯ ಎಂದು ಡಾ. ಜಿ.ಶಂಕರ್ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ.ಎಸ್ ಹೇಳಿದರು.

ಅವರು ಬುಧವಾರ ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಸಭಾಂಗಣದಲ್ಲಿ ನಡೆದ ಅಭಿನಯ ಕಲೆಯಿಂದ ಕೌಶಲ್ಯ ಅಭಿವೃದ್ಧಿ- ಒಂದು ದಿನದ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿ, ಅರ್ಥಗರ್ಭಿತ ಜೀವನ ಕಟ್ಟಿಕೊಳ್ಳಲು ರಂಗ ತರಬೇತಿ ಶಿಬಿರಗಳು ಉಪಯುಕ್ತವಾಗಿವೆ. ಅಂತಹ ಕೌಶಲ್ಯವನ್ನು ಬೆಳೆಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಹೇಳಿದರು.

ರಂಗ ತರಬೇತಿ ಶಿಬಿರವು ರಂಗ ನಿರ್ದೇಶಕ ಬಾಸುಮ ಕೊಡಗು ಇವರ ಸಾರಥ್ಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಂಗ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಉಪನ್ಯಾಸಕ ಚಂದ್ರ ನಿರೂಪಿಸಿ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ವಂದಿಸಿದರು.