ತ್ರಿಶಾ ವಿದ್ಯಾ ಪಿಯು ಕಾಲೇಜು: ವಿಶ್ವ ಪರಿಸರ ದಿನಾಚರಣೆ.

ಉಡುಪಿ: ಪ್ರಸ್ತುತ ದಿನಮಾನದಲ್ಲಿ ಹಾಳಾಗುತ್ತಿರುವ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ. ನಮ್ಮ ಮುಂದಿನ ಜನಾಂಗಕ್ಕೂ ಪರಿಸರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಈ ಪರಿಸರವನ್ನು ಉಳಿಸುವ ಯೋಚನೆಯನ್ನು ಮಾಡಲೇಬೇಕು ಎಂದು ಇತ್ತೀಚಿಗೆ ತ್ರಿಶಾ ವಿದ್ಯಾ ಪಿಯು ಕಾಲೇಜು ಕಟಪಾಡಿಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜೆಸಿಐ ಕಟಪಾಡಿಯ ಅಧ್ಯಕ್ಷರಾದ ಪ್ರಶಾಂತ್ ಆರ್ ಎಸ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಂತ್ ಪೈ ಇವರು ಜಾಗತಿಕ ತಾಪಮಾನ ಏರಿಕೆ, ಭೂದೇವಿಗೆ ಮನುಷ್ಯರಂತಹ ಜೀವಿಗಳಿಂದ ಬಂದ ಜ್ವರ. ಭೂದೇವಿಯ ಮಕ್ಕಳುಗಳಾದ ನಾವುಗಳು ಭೂ ದೇವಿಯ ಜ್ವರವನ್ನು ತಗ್ಗಿಸಲು ಮರಗಳನ್ನು ನೆಡಲೇಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಸಿಐ ಕಟಪಾಡಿಯ ಸದಸ್ಯರು ಮತ್ತು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕರಾದ ಸರಿತಾ ರವರ ನೇತೃತ್ವದಲ್ಲಿ , ವಿದ್ಯಾರ್ಥಿಗಳಾದ ತ್ರಿಶಾ ಸ್ವಾಗತಿಸಿ, ಭವಿಷ್ ನಿರೂಪಿಸಿ, ಅರ್ಚನ ವಂದಿಸಿದರು ಹಾಗೂ ಐಶ್ವರ್ಯ ಮತ್ತು ಮೀನಾಕ್ಷಿ ಆ ದಿನದ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪರಿಸರ ದಿನಾಚರಣೆಯ ಪ್ರಯುಕ್ತ ನಡೆಸಲಾದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಸಂದೇಶವನ್ನು ಗಿಡ ನೆಡುವ ಮೂಲಕ ನೀಡಲಾಯಿತು.