ಮಾಂಬಾಡಿಯವರಿಗೆ ಪಾರ್ಥಿಸುಬ್ಬ ಪ್ರಶಸ್ತಿ ಲಭಿಸಿರುವುದು ಯಕ್ಷಗಾನದ ಹಿರಿಮೆಯನ್ನು ಹೆಚ್ಚಿಸಿದೆ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಪ್ರಸಿದ್ಧ ಭಾಗವತರ ಗುರುಗಳಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಲವಲವಿಕೆಯಿಂದ ಭಾಗವತಿಕೆಯ ಮೂಲ ಪಾಠವನ್ನು ಮಾಡುತ್ತಾ ಗಾನಾಮೃತದ ಮೂಲ ಸತ್ವವನ್ನು ವಿವರಿಸುತ್ತಾ ಪ್ರಸಿದ್ದಿ ಪಡೆದ ಭಾಗವತರು. ೭೫ರ ಇಳೀ ವಯಸ್ಸಿನಲ್ಲಿಯೂ ಅವರ ಪಾಠವನ್ನು ಮುಂದುವರಿಸಿರುವುದು ಶ್ಲಾಘನೀಯ. ಅವರ ಈ ಕಲಾಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೨೪ನೇ ಸಾಲಿನ ಪ್ರತಿಷ್ಠಿತ ` ಪಾರ್ಥಿಸುಬ್ಬ ಪ್ರಶಸ್ತಿ’ ನೀಡುತ್ತಿರುವುದು ಯಕ್ಷಗಾನ ಕಲೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಯಶಸ್ವೀ ಕಲಾವೃಂದ ಕೊಮೆ ವತಿಯಿಂದ ಹಮ್ಮಿಕೊಂಡ ‘ತೆಂಕುತಿಟ್ಟು ಭಾಗವತಿಕೆ ತರಗತಿ ಉದ್ಘಾಟನೆ ‘ ಕಾರ್ಯಕ್ರಮದಲ್ಲಿ ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಹಿರಿಯ ಭಾಗವತ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಅರ್ಹರಿಗೆ ಯಕ್ಷಗಾನ ಅಕಾಡೆಮಿಯ ಗೌರವಗಳು ಸಲ್ಲಬೇಕು ಎಂಬುದು ಅಧ್ಯಕ್ಷನಾಗಿ ನನ್ನ ಚಿಂತನೆಯಾಗಿದೆ. ಅದರಲ್ಲೂ ಯಕ್ಷಗಾನಕ್ಕಾಗಿ ತಮ್ಮನ್ನೇ ಮುಡಿಪಾಗಿಟ್ಟು, ಯಕ್ಷಗಾನದ ಏಳ್ಗೆಗಾಗಿ ಹಗಲಿರುಳು ಸೇವೆ ಸಲ್ಲಿಸಿದ ಹಿರಿಯ ಕಲಾವಿದರನ್ನು ಗುರುತಿಸಿ, ಸನ್ಮಾನಿಸಬೇಕು. ಈ ಮೂಲಕ ಯಕ್ಷಗಾನ ಕಲೆಯ ಉಳಿವಿಗೆ ಕಾರಣರಾದ ಈ ಮಹಾನ್ ಚೇತನಗಳಿಗೆ ಗೌರವ ಸಲ್ಲಬೇಕು ಎಂಬುದು ನನ್ನ ಆಶಯ. ಪ್ರಸ್ತುತ ಮಾಂಬಾಡಿ ಭಾಗವತರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಯಕ್ಷಗಾನ ಕಲಾವಿದರು, ಅಭಿಮಾನಿಗಳಿಗೆ ಹೆಚ್ಚಿನ ಸಂತೋಷವನ್ನುಂಟು ಮಾಡಿದೆ ಎಂದ ಅವರು ಯಶಸ್ವೀ ಕಲಾವೃಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ತೆಂಕುತಿಟ್ಟು ಹಿಮ್ಮೇಳ ತರಗತಿಯನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.

ತರಗತಿಯನ್ನು ಉದ್ಘಾಟಿಸಿದ ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾತನಾಡಿ, ಕರಾವಳಿಯ ಅಭಿಮಾನದ ಕಲಾಸಂಸ್ಥೆಯಾದ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ಇನ್ನು ಮುಂದೆ ಬಡಗಿನ ಹಿಮ್ಮೇಳದೊಂದಿಗೆ ತೆಂಕುತಿಟ್ಟು ಹಿಮ್ಮೇಳ ತರಗತಿಯೂ ನಡೆಯುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಾವಿದ ಕೋಟ ಸುದರ್ಶನ ಉರಾಳ, ಶ್ವೇತಯಾನದ ಕಾರ್ಯಾಧ್ಯಕ್ಷ ಗೋಪಾಲ ಪೂಜಾರಿ ಕೊಮೆ, ಪವನ್ ಆಚಾರ್, ಕಾರ್ಯದರ್ಶಿ ವೆಂಕಟೇಶ ವೈದ್ಯ, ಮೋಹನಚಂದ್ರ ಪಂಜಿಗಾರು ಉಪಸ್ಥಿತರಿದ್ದರು.

ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಲಂಬೋದರ ಹೆಗಡೆ ಪ್ರಾಸ್ತಾವಿಕ ಮಾತನ್ನಾಡಿದರು. ಪೂಜಾ ಆಚಾರ್, ಪಂಚಮಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಬಗ್ಗೆ ಒಂದಿಷ್ಟು:
ಯಕ್ಷಗಾನ ಕಲಾಕ್ಷೇತ್ರದಲ್ಲಿ ಹಿಮ್ಮೇಳ ವಾದಕರಾಗಿ ತಿರುಗಾಟವನ್ನು ಮಾಡಿರುವುದರ ಜೊತೆಗೆ ಗುರುಪರಂಪರೆಯನ್ನು ಮೆರೆಸಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬಾರಿ ಜನಪ್ರಿಯತೆ ಗಳಿಸಿದ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಮಾಂಬಾಡಿ ನಾರಾಯಣ ಭಾಗವತರ ಸುಪುತ್ರರಾಗಿ ತಂದೆಯ ಆದರ್ಶವನ್ನು ಮರೆಸಿದವರು. ರಕ್ತಗತವಾಗಿ ಬಂದ ಪ್ರತಿಭೆಯೊಂದಿಗೆ ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ಸುಬ್ರಹ್ಮಣ್ಯ ಭಟ್ಟರು ಕಟೀಲು, ಕರ್ನಾಟಕ, ಕದ್ರಿ ಮೊದಲಾದ ಮೇಳಗಳಲ್ಲಿ ತಿರುಗಾಟವನ್ನು ನಡೆಸಿದ್ದಾರೆ. ಕಲಾವಿದರ ಮನೋಧರ್ಮಕ್ಕೆ ತಕ್ಕಂತೆ ರಸಪೋಷಣೆಗೆ ಅನುಗುಣವಾಗಿ ಚಂಡೆ, ಮದ್ದಳೆಯನ್ನು ನುಡಿಸುವ ಇವರು ಕಾಸರಗೋಡು, ದ.ಕ.ಜಿಲ್ಲೆ ಸೇರಿದಂತೆ ತೆಂಕುತಿಟ್ಟಿನಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ನೂರಾರು ಶಿಷ್ಯರನ್ನು ತಯಾರಿಸಿದ್ದಾರೆ. ಇವರಲ್ಲಿ ಅನೇಕರು ವೃತ್ತಪರ ಕಲಾವಿದರಾಗಿ ಹಾಗೂ ಇನ್ನು ಕೆಲವರು ಹವ್ಯಾಸಿ ಕಲಾವಿದರಾಗಿ ಮಿಂಚಿದ್ದಾರೆ. ಇವರ ಅಪ್ರತಿಮ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೨೪ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಿದೆ.