ಉಡುಪಿ: ಉಡುಪಿಯ ಬಸ್ ನಿಲ್ದಾಣಗಳಲ್ಲಿ ಹೊರಜಿಲ್ಲೆಗಳ ವಲಸೆ ಕಾರ್ಮಿಕರು ವಿಪರೀತ ಪಾನಮತ್ತರಾಗಿ ಬಿದ್ದಿರುವುದು ಕಂಡುಬರುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀರಾ ತೊಂದರೆ ಎದುರಿಸುವಂತಾಗಿದೆ.
ಸಂಜೆಯಾಗುತ್ತಲೇ ಉಡುಪಿ ಸಿಟಿ ಬಸ್ ನಿಲ್ದಾಣ, ನರ್ಮ್ ಬಸ್ ನಿಲ್ದಾಣ ಸೇರಿದಂತೆ ಸುತ್ತಮತ್ತಲು ಮದ್ಯ ವ್ಯಸನಿ ಕಾರ್ಮಿಕರು ಪಾನಮತ್ತರಾಗಿ ಪರಸ್ಪರ ಗಲಾಟೆ ಮಾಡುವುದು, ಕಚ್ಚಾಡಿಕೊಳ್ಳುವುದು, ಹೊಡೆದಾಡಿಕೊಳ್ಳುತ್ತಿದ್ದಾರೆ. ಇದೀಗ ಇವರು ಸ್ಥಳೀಯರ ಮೇಲೂ ಏರಿ ಬರುತ್ತಿರುವುದು ಕಂಡುಬಂದಿದೆ.
ಅಲ್ಲೇ ಮಲಗುವುದು, ಅಲ್ಲೇ ಊಟ, ಅಲ್ಲೇ ಮದ್ಯ ಸೇವನೆ, ಅಲ್ಲಿಯೇ ಜೂಜಾಡುತ್ತಾರೆ. ಮತ್ತೆ ವಿನಾಕಾರಣ ಗಲಾಟೆ ಮಾಡಿಕೊಳ್ಳುತ್ತಾರೆ. ಇವರು ಕುಡಿದ ಮದ್ಯದ ಬಾಟಲಿ, ತಿಂದ ವಸ್ತುಗಳನ್ನು ಅಲ್ಲಿಯೇ ಎಸೆದು ಗಲೀಜು ಮಾಡುತ್ತಿದ್ದಾರೆ. ಒಟ್ಟಾರೆ ರಾತ್ರಿಯಾಗುತ್ತಿದ್ದಂತೆ ಈ ಸ್ಥಳಗಳು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಇದೀಗ ಉಡುಪಿ ನಗರ ಪೊಲೀಸರು ಕುಡುಕರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಲಗಿದ್ದ ಕುಡುಕರನ್ನು ಎಬ್ಬಿಸಿದ್ದಾರೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಕ್ರಮ ಮುಂದುವರಿಸುವುದಾಗಿ ಹೇಳಿದ್ದಾರೆ.