ಕಾರವಾರ- ಗೋವಾ ಬಳಿಯ ಕಾಳಿ ಸೇತುವೆ ಕುಸಿತ: ಲಾರಿ ಚಾಲಕನ ರಕ್ಷಣೆ, ವಾಹನ ಸಂಚಾರ ನಿರ್ಬಂಧ.

ಕಾರವಾರ: ಕಾರವಾರದ ಕಾಳಿ ನದಿಗೆ ಕಟ್ಟಿರುವ ಹಳೆಯ ಸೇತುವೆ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕುಸಿದಿದೆ. ಅದೇ ವೇಳೆ ಸೇತುವೆಯ ಮೇಲೆ ಒಂದು ಲಾರಿ ಕಾರವಾರದಿಂದ ಗೋವಾ ಕಡೆಗೆ ತೆರಳುತ್ತಿತ್ತು.

ಲಾರಿ ಚಾಲಕ ರಕ್ಷಣೆ:

ಸೇತುವೆ ಕುಸಿದ ತಕ್ಷಣ ಲಾರಿ ಚಾಲಕ ಮುರುಗನ್ ಲಾರಿಯ ಕ್ಯಾಬಿನ್ ಹತ್ತಿ ಕೂಗಿಕೊಂಡಿದ್ದಾನೆ. ದಂಡೆಯಲ್ಲಿದ್ದವರು ಈ ಘಟನೆ ನೋಡಿ ಕರಾವಳಿ ಕಾವಲು ಪಡೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ನದಿಗೆ ಇಳಿದ ಕರಾವಳಿ ಕಾವಲು ಪಡೆ, ಆಗ್ನಿ ಶಾಮಕದಳ, ಮೀನುಗಾರಿಕಾ ದೋಣಿಯಲ್ಲಿದ್ದವರು, ಚಾಲಕ ಮುರುಗನ್ ರನ್ನು ಆಸ್ಪತ್ರೆಗೆ ದಾಖಲಿಸಿದರು.

ಸಂಚಾರಕ್ಕೆ ನಿರ್ಬಂಧ:

ಮಧ್ಯರಾತ್ರಿ ಕಳೆದ ನಂತರ ಈ ದುರ್ಘಟನೆ ನಡೆದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಾಳಿ‌ ನದಿಗೆ ಕಟ್ಟಿದ ಹಳೆಯ ಸೇತುವೆ ಇದಾಗಿದ್ದು, ವಾಹನ ಸಂಚಾರ ಚಾಲ್ತಿಯಲ್ಲಿತ್ತು. ಘಟನೆ ನಂತರ ಕಾರವಾರ ಸದಾಶಿವಗಡ, ಗೋವಾ ಮಧ್ಯೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.

ಸ್ಥಳಕ್ಕೆ ಶಾಸಕ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಎಸ್ಪಿ ಭೇಟಿ ನೀಡಿದ್ದಾರೆ.

ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ ಸೇತುವೆ:

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವ ಕಾಳಿ ನದಿಗೆ ಈ ಸೇತುವೆಯನ್ನು ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲಿ ನಿರ್ಮಿಸಲಾಗಿತ್ತು. ನಾಲ್ಕು ದಶಕಗಳ ಹಿಂದೆ ಕಾಳಿ ನದಿಗೆ ನಿರ್ಮಿಸಿದ ಸೇತುವೆ ಇದಾಗಿತ್ತು. ಇದರ ಪಕ್ಕದಲ್ಲಿ ಹೊಸ ಸೇತುವೆ ಸಹ ಈಚಿಗೆ ಮೂರು ವರ್ಷಗಳ ಹಿಂದೆ ನಿರ್ಮಿಸಿ ಬಳಸಲಾಗುತ್ತಿದೆ.