ಉಡುಪಿ: ಆನ್‌ಲೈನ್ ವಂಚನೆ ಪ್ರಕರಣ; ಆರೋಪಿ ಸೆರೆ, 1,56,100 ರೂ. ನಗದು ವಶ.

ಉಡುಪಿ: ಆನ್‌ಲೈನ್ ಸೈಬರ್ ವಂಚನೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ 1,56,100 ರೂಪಾಯಿ ನಗದು ವಶಪಡಿಸಿಕೊಳ್ಳುವಲ್ಲಿ ಉಡುಪಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಒಡಿಶಾದ ಗಂಜಾಂ ಜಿಲ್ಲೆಯ ನಿವಾಸಿ ವಿಶಾಲ್ ಕೊನಪಾಲ (30). ವಿದೇಶದಲ್ಲಿ ಉದ್ಯೋಗದಲ್ಲಿರುವ ದೂರುದಾರ ಬೆಳ್ಮಣ್‌ನ ಜಯ ಶೆಟ್ಟಿ ಅವರ ಪುತ್ರ ಪ್ರಶಾಂತ್ ಶೆಟ್ಟಿ ಅವರು ಬೆಳ್ಮಣ್ ಶಾಖೆಯ ಯೂನಿಯನ್ ಬ್ಯಾಂಕ್‌ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಈ ಖಾತೆಗಳನ್ನು ಪೇಟಿಎಂನ ಆನ್‌ಲೈನ್ ಪಾವತಿ ವ್ಯವಸ್ಥೆಗೆ ಲಿಂಕ್ ಮಾಡಲಾಗಿದೆ. ಈ ಖಾತೆಗಳಿಂದ 2024ರ ಫೆಬ್ರವರಿ 10 ರಿಂದ ಫೆಬ್ರವರಿ 20ರ ನಡುವೆ, ಅಪರಿಚಿತ ವ್ಯಕ್ತಿ ಪ್ರಶಾಂತ್ ಶೆಟ್ಟಿಯವರಿಗೆ ತಿಳಿಯದಂತೆ ಹಲವಾರು ಕಂತುಗಳಲ್ಲಿ ಒಟ್ಟು 1,56,100 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಜಯ ಶೆಟ್ಟಿ ಅವರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಜಯ ಶೆಟ್ಟಿ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಎಎಸ್‌ಐ ಉಮೇಶ್ ಜೋಗಿ ಮತ್ತು ಸಿಬ್ಬಂದಿ ನೀಲೇಶ್ ನೇತೃತ್ವದ ತಂಡ ಒಡಿಶಾದ ಬೆರ್ಹಾಂಪುರಕ್ಕೆ ತೆರಳಿದೆ. ಆರೋಪಿಯ ಬಗ್ಗೆ ಗುಪ್ತಚರ ಮಾಹಿತಿ ಕಲೆಹಾಕಿದ ತಂಡವು, ಆರೋಪಿ ವಿಶಾಲ್ ಕೊನಪಾಲನನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದೆ. ಜೊತೆಗೆ ಆರೋಪಿಯು ಬ್ಯಾಂಕ್ ಖಾತೆಯಿಂದ ವಂಚಿಸಿದ 1,56,100 ರೂ.ಗಳನ್ನು ವಸೂಲಿ ಮಾಡುವಲ್ಲಿ ತಂಡವು ಯಶಸ್ವಿಯಾಗಿದೆ.