ಮಣಿಪಾಲದಲ್ಲಿ 19ರ ಯುವಕನ ಅಂಗದಾನದಿಂದ 6 ಮಂದಿಗೆ ಜೀವದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಶ್ರೀನಿವಾಸ್ 

ಮಣಿಪಾಲ: ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ 19ರ ಹರೆಯದ ಯುವಕ, ಚಿಕಿತ್ಸೆಯ ಬಳಿಕವೂ ಬದುಕುಳಿಯುವ ಸಾಧ್ಯತೆ ಕಾಣದ ಹಿನ್ನೆಲೆಯಲ್ಲಿ ಆತನ ಕುಟುಂಬಿಕರ ಅನುಮತಿ ಪಡೆದು ಆತನ ವಿವಿಧ ಅಂಗಗಳ ದಾನದ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರು ಆರು ಮಂದಿಗೆ ಜೀವದಾನ ನೀಡಿದರು.

ಬ್ರಹ್ಮಾವರ ಸಮೀಪದ ಉಪ್ಪಿನಕೋಟೆ ಬಳಿ ಎ.2ರ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾಲಿಗ್ರಾಮದ ರಾಜು ನಾಯರಿ ಎಂಬವರ 19ರ ಹರೆಯದ ಪುತ್ರ ಶ್ರೀನಿವಾಸ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು.

ಶ್ರೀನಿವಾಸ ಗಂಭೀರವಾಗಿ ಗಾಯಗೊಂಡಿದ್ದರಿಂದ ಕೆಎಂಸಿ ತಜ್ಞ ವೈದ್ಯರ ತೀವ್ರ ಪ್ರಯತ್ನಗಳ ಹೊರತಾಗಿಯೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣ ಕಂಡು ಬರಲಿಲ್ಲ. ಆರು ಗಂಟೆಗಳ ಅಂತರದಲ್ಲಿ ಶ್ರೀನಿವಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ ಅವರ ತಂದೆ ರಾಜು ನಾಯರಿ ಮಗನ ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ ಒಪ್ಪಿಗೆಯನ್ನು ನೀಡಿದ್ದರು.

ಶ್ರೀನಿವಾಸ ಅವರ ಎರಡು ಮೂತ್ರಪಿಂಡಗಳು, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆದು ಒಟ್ಟು 6 ಜನರ ಜೀವ ಉಳಿಸಲು ಸಹಕಾರಿಯಾದವು.

ಇವುಗಳಲ್ಲಿ ಎರಡು ಕಾರ್ನಿಯಾಗಳು ಮತ್ತು ಎರಡು ಮೂತ್ರಪಿಂಡ ಹಾಗೂ ಚರ್ಮವನ್ನು ಮಣಿಪಾಲ ಕೆಎಂಸಿಯಲ್ಲಿರುವ ನೊಂದಾಯಿತ ರೋಗಿಗಳಿಗೆ ಬಳಸಲಾಯಿತು. ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ವಿಶೇಷ ವ್ಯವಸ್ಥೆಯಲ್ಲಿ  ವಿಮಾನದ ಮೂಲಕ ಕಳುಹಿಸಿಕೊಡಲಾಯಿತು.