ರಸ್ತೆಯಲ್ಲಿ‌ ಸಿಕ್ಕಿದ ಪರ್ಸ್ ವಾರಸುದಾರರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಸುಧೀರ್ ಶೇರಿಗಾರ್

ಸುಧೀರ್ ಶೇರಿಗಾರ್           ಸಂತೋಷ್ ಆಚಾರ್ಯ

ಮಣಿಪಾಲ: ರಸ್ತೆಯಲ್ಲಿ‌ ಸಿಕ್ಕಿದ ₹20 ಸಾವಿರ ನಗದುಳ್ಳ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಸುಧೀರ್ ಶೇರಿಗಾರ್ ಮಂಚಿ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಮೂರು ದಿನಗಳ ಹಿಂದೆ ಮಣಿಪಾಲ ರಾಜೀವನಗರದಿಂದ ಪ್ರಗತಿನಗರಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ನಗದುಳ್ಳ ಪರ್ಸ್ ಸುಧೀರ್ ಅವರಿಗೆ ಸಿಕ್ಕಿತ್ತು. ಬಳಿಕ ಪರ್ಸ್ ಕಳೆದುಕೊಂಡ ವ್ಯಕ್ತಿಗಾಗಿ ಸಂಪರ್ಕಿಸಿದ್ದಾರೆ.

ಸ್ನೇಹಿತರ ಮೂಲಕ‌ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದು, ಅಲೆವೂರು ಮರ್ಣೆಯ ಸಂತೋಷ್ ಆಚಾರ್ಯ ಎಂಬವರು ಪರ್ಸ್ ಕಳೆದುಕೊಂಡಿದ್ದಾರೆ ಗೊತ್ತಾಗಿದೆ. ಬಳಿಕ‌ ಅವರನ್ನು ತಮ್ಮ ಅಂಗಡಿಗೆ ಬರಮಾಡಿಕೊಂಡು ಪರ್ಸ್ ಅನ್ನು ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸುಧೀರ್ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಂತೋಷ್ ಮನೆಯ ಕಾರ್ಯಕ್ರಮಕ್ಕಾಗಿ ಬ್ಯಾಂಕ್ ನಲ್ಲಿ ₹20 ಸಾವಿರ ನಗದು ಡ್ರಾ ಮಾಡಿಕೊಂಡು ಬಂದಿದ್ದರು. ರಾಜೀವನಗರದ ಬಳಿ ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿ ಬರುವ ವೇಳೆಯಲ್ಲಿ ಅಕಸ್ಮಾತ್ ಆಗಿ ಪರ್ಸ್ ಕೆಳಗೆ ಬಿದ್ದಿತ್ತು. ಇದು ಸಂತೋಷ್ ಗಮನಕ್ಕೆ ಬಂದಿರಲಿಲ್ಲ.