ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕೂಡಲೇ ಬಿಜೆಪಿಯಿಂದ ಉಚ್ಚಾಟಿಸಿ: ಈಶ್ವರಪ್ಪ

ಕೊಪ್ಪಳ: ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಕೂಡಲೇ ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು. ಆತನಿಗೆ ಯಾವುದೇ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

‘ಬಿಎಸ್ ವೈ ಹೆಚ್ಚು ದಿನ ಸಿಎಂ ಸ್ಥಾನದಲ್ಲಿ ಇರಲ್ಲ’ ಎಂಬ ಯತ್ನಾಳ್ ಹೇಳಿಕೆಗೆ ಕೊಪ್ಪಳದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳಿಕೆ ಮೂರ್ಖತನದ್ದು, ಬಾಯಿ ಚಪಲದಿಂದ ಇಂತಹ ಹೇಳಿಕೆ ನೀಡುತ್ತಾರೆ ಎಂದು ಹರಿಹಾಯ್ದರು.

ಯತ್ನಾಳ್ ವಿರುದ್ಧ ಕ್ರಮ ಖಚಿತ, ಇದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಸ್ವತಃ ನಾನೇ ಪಕ್ಷದ ಅಧ್ಯಕ್ಷರಿಗೆ ಹೇಳುತ್ತೇನೆ ಎಂದರು.

ಯತ್ನಾಳ್ ಹೇಳಿಕೆಯಿಂದ ಕಾಂಗ್ರೆಸ್ ನವರಿಗೆ ಸಂತಸ ಆಗಿರಬಹುದು. ಬಿಜೆಪಿ ಸರ್ಕಾರವನ್ನು ನಾವು ಬೀಳಿಸಲ್ಲ ಎಂದು ಸಿದ್ದರಾಮಯ್ಯ ಹೇಳ್ತಾರೆ. ಆದರೆ ಅವರಲ್ಲ, ಸ್ವರ್ಗದಲ್ಲಿರುವ ಇಂದಿರಾ ಗಾಂಧಿ ಬಂದ್ರೂ ಸರ್ಕಾರ ಬೀಳಿಸಲು ಆಗಲ್ಲ ಎಂದು ಟಾಂಗ್ ನೀಡಿದರು.