ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನದ ಕೊಡುಗೆ ಅಪಾರ: ಗೋಪಾಲಕೃಷ್ಣ ನಾಯರಿ

ಉಡುಪಿ, ಮಾ.7: ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನದ ಕೊಡುಗೆ ಅಪಾರವಾಗಿದ್ದು, ಯಕ್ಷಗಾನ ಹಾಗೂ ನಾಟಕಗಳಿಗೆ ಇರುವಷ್ಟು ಶಕ್ತಿ ಬೇರಾವುದೇ ಕಲೆಗಳಿಗೆ ಇಲ್ಲ ಎಂದು ರಂಗ ಸಂಶೋಧನಾ ಕೇಂದ್ರದ ಮುಖ್ಯಸ್ಥ ಗೋಪಾಲಕೃಷ್ಣ ನಾಯರಿ ಹೇಳಿದರು.

ಅವರು ರವಿವಾರ, ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಸಮಸ್ತರು ರಂಗ ಸಂಶೋಧನಾ ಕೆಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 3 ದಿನಗಳ ಯಕ್ಷೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲಾವಿದೆ ಚಂದ್ರಿಕಾ ಧನ್ಯ ಮಾತನಾಡಿ, ಯಕ್ಷಗಾನ ಎಂಬುದು ಕರಾವಳಿಗರಿಗೆ ರಕ್ತಗತವಾಗಿಯೇ ಬಂದಂತಹ ಕಲೆಯಾಗಿದೆ. ಯಕ್ಷಗಾನದಲ್ಲಿ ವಾಚನ, ನರ್ತನ, ಗಾಯನ, ಪ್ರಬುದ್ಧ ಮಾತುಗಾರಿಕೆ, ವೇಷ-ಭೂಷಣ ಇವೆಲ್ಲವುಗಳು ಯಕ್ಷಗಾನವನ್ನು ಅತ್ಯಂತ ರಮಣೀಯ ಕಲೆಯನ್ನಾಗಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಶೇಷಗಿರಿ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಧನ್ವ ಕಾಳಗ ಮತ್ತು ಧ್ರುವ ಚರಿತ್ರೆ ಯಕ್ಷಗಾನ ಪ್ರಯೋಗಗಳು ನಡೆದವು.