ಉಡುಪಿ: ಯಕ್ಷ ಧ್ರುವ – ಯಕ್ಷ ಶಿಕ್ಷಣ ಉದ್ಘಾಟನೆ ಮತ್ತು ನಾಟ್ಯಾರಂಭ

ಉಡುಪಿ: ಬೆಳಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯವರಗೆ, ವಗ್ಗ, ಪುಂಜಾಲಕಟ್ಟೆ, ಮಚ್ಚಿನ, ನಿಡ್ಲೆ ಮತ್ತು ಮುಂಡಾಜೆಯಲ್ಲಿ ಯಕ್ಷಧ್ರುವ – ಯಕ್ಷ ಶಿಕ್ಷಣದ ಉದ್ಘಾಟನೆ ಮತ್ತು ನಾಟ್ಯಾರಂಭ ಕಾರ್ಯಕ್ರಮ. ಬಿಡುವಿಲ್ಲದೆ ಸುಮಾರು 150 ಕಿ.ಮೀ ಮಿಕ್ಕಿ ಪ್ರಯಾಣ, ನಡುವಿನಲ್ಲಿ ದೂರದಲ್ಲಿ ನಡೆದ ಒಂದು ಮಹಿಳೆ ಮತ್ತು ಮಗುವಿನ ಸ್ಕೂಟರ್ ಆಕ್ಸಿಡೆಂಟ್ ನೋಡಿ ಧಾವಿಸಿ ಸಹಾಯ, ನಮ್ಮನ್ನು ಓಯ್ಯುತ್ತಿದ್ದ ಭಾಗವತರ ವಾಹನದ ಟೈರ್ ಪಂಚರ್, ಎಡಬಿಡದೆ ಘಟಕಗಳಿಂದ ಮತ್ತು ಅಭಿಮಾನಿಗಳಿಂದ ಫೋನ್ ಇದೆಲ್ಲದರ ನಡುವೆ ಯಕ್ಷಧ್ರುವ ಯಕ್ಷ ಶಿಕ್ಷಣದ ಮುಂದಿನ ಕೆಲಸದ ಬಗ್ಗೆ ಚರ್ಚೆ… ಹೀಗೆ ಊಟ ಇಲ್ಲದೆ ದಿನಕಳೆದದ್ದೆ ಗೊತ್ತಾಗಿಲ್ಲ. ಎಲ್ಲ ಮುಗಿದ ನಂತರ ನಮ್ಮನ್ನು ಬೀಳ್ಕೊಟ್ಟು ಉಜಿರೆಯಲ್ಲಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಸುಮಾರು ನಾಲ್ಕು ಗಂಟೆಯಷ್ಟು ಸಮಯ ಭಾಗವತಿಕೆ ಮಾಡುವುದಲ್ಲದೆ ಮಧ್ಯರಾತ್ರಿಯಿಂದ ಮಂಗಳೂರು ಪುರಭವನದಲ್ಲಿ ನಡೆಯುವ ಯಕ್ಷಗಾನದಲ್ಲಿ ಭಾಗವತಿಕೆ ಮಾಡಿ ಮನೆಸೇರುವಾಗ ಅಂದಾಜು ಬೆಳೆಗಿನ ಜಾವ ಮೂರು ಗಂಟೆ ಆಗುತ್ತದೆ ಎಂದು ಕೇಳಿದಾಗಲೇ ನಾನು ಸುಸ್ತು ಹೊಡೆದೆನು.

ಮುಂದೆ ನನ್ನನ್ನು ಉದ್ದೇಶಿಸಿ ‘ನಾಳೆ ಯಾವ ಶಾಲೆಗೆ ಹೋಗುವ ಐತಾಳರೇ’ ಎಂದು ಹೇಳುವಾಗ ನನ್ನ ಬಾಯಿಂದ ಮಾತೆ ಹೊರಡಲಿಲ್ಲ. ಮನೆಗೆ ಬಂದು ಇಂದು ತೆಗೆದ ಭಾವಚಿತ್ರಗಳನ್ನು ನೋಡಿದಾಗ ಈ ಚಿತ್ರದಲ್ಲಿ ಕಂಡುಬರುವ ಭಾಗವತರ ಮಾತಿಗೆ ಪ್ರತಿಕ್ರಿಯೆಯಾಗಿ ನೂರಕ್ಕೂ ಮಿಕ್ಕಿದ ಮಕ್ಕಳ ಮುಖದ ಭಾವನೆಯೇ ನನ್ನ ಪ್ರಶ್ನೆಗೆ ಉತ್ತರ ನೀಡಿತು. ಹಿರಿಯರಾದ ಜೋಶಿಯವರು ಹೇಳಿದಂತೆ ‘ಪಟ್ಲರು ಒಂದು ವಿಸ್ಮಯವೇ ಸರಿ’. ಯಕ್ಷದ್ರುವ ಯಕ್ಷಶಿಕ್ಷಣ ಒಂದು ಅದ್ಭುತ ಕ್ರಾಂತಿಯಾಗುವುದರಲ್ಲಿ ಸಂಶಯವೇ ಇಲ್ಲ. ನಾವೆಲ್ಲರೂ ಭಾಗವತರ ಈ ಕೈಂಕರ್ಯದಲ್ಲಿ ಭಾಗವಹಿಸುವ ಸೌಭಾಗ್ಯ ನಮಗಿಂದು ಒದಗಿದೆ ಎಂದು ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಹೇಳಿದ್ದಾರೆ.