ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ- ಎಂಡೋಸ್ಕೋಪಿಕ್ ಸರ್ಜರಿ ಕಾರ್ಯಾಗಾರ

ಮಣಿಪಾಲ: ಕೆ.ಎಂ.ಸಿ ಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗವು ಸೆ. 2 ಮತ್ತು 3 ರಂದು ಎಂಡೋಸ್ಕೋಪಿಕ್ ಸರ್ಜರಿ-ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸುಧಾರಿತ ಎಂಡೋಸ್ಕೋಪಿಕ್ ಕಾರ್ಯವಿಧಾನಕ್ಕಾಗಿ ಮೊದಲ ತರಬೇತಿ ಕಾರ್ಯಾಗಾರವಾಗಿತ್ತು.

ಅಚಾಲಾಸಿಯಾ ಕಾರ್ಡಿಯಾ, ಆಹಾರ ಸೇವಿಸುವಲ್ಲಿ ತೊಂದರೆ, ಅನ್ನನಾಳದ ಅಸ್ವಸ್ಥತೆಯನ್ನು ಪೆರೋರಲ್ ಎಂಡೋಸ್ಕೋಪಿಕ್ ಮೈಯೋಟೊಮಿ ಎಂಬ ಕಡಿಮೆ ಛೇದನದ, ಗಾಯ ರಹಿತ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ನಿರ್ವಹಿಸಬಹುದು. ಈ ಕಾರ್ಯವಿಧಾನವು ಅಂದುಕೊಂಡಂತೆ ಯಶಸ್ವಿಯಾಗಿ ನಡೆದರೆ ರೋಗಿಯನ್ನು 48 ಗಂಟೆಗಳ ಒಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗದ ವೈದ್ಯರು ಆಗಮಿಸಿ ಈ ಹೊಸ ತಂತ್ರಜ್ಞಾನದ ಕುರಿತು ತರಬೇತಿ ಪಡೆದರು.

ಸಂಪನ್ಮೂಲ ವ್ಯಕ್ತಿಗಳಾಗಿ ಕೊಚ್ಚಿಯಿಂದ ಡಾ. ರಾಜವೇಣುಗೋಪಾಲ್, ಬೆಂಗಳೂರಿನಿಂದ ಡಾ. ಪ್ರಕಾಶ್ ಝಡ್, ಕಸ್ತೂರ್ಬಾ ಆಸ್ಪತ್ರೆಯ ಡಾ.ಶಿರನ್ ಶೆಟ್ಟಿ, ಮತ್ತು ಡಾ.ಗಣೇಶ್ ಭಟ್ ತರಬೇತಿ ನೀಡಿದರು.

ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಜಾಗತಿಕ ಗುಣಮಟ್ಟಕ್ಕೆ ಸಮನಾದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಹೊಂದಿದ್ದೇವೆ ಮತ್ತು ಭಾರತದ ಇತರ ಆಸ್ಪತ್ರೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾರ್ಯವಿಧಾನವನ್ನು ಮಾಡಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ 70 ವರ್ಷಗಳ ಆಚರಣೆಯ ಈ ಸಂದರ್ಭದಲ್ಲಿ ನಮ್ಮ ಸಂಸ್ಥಾಪಕ ಡಾ.ಟಿ.ಎಂ.ಎ ಪೈ ಅವರ ಕನಸಿನಂತೆ ಜ್ಞಾನ ಮತ್ತು ಶಿಕ್ಷಣವನ್ನು ಹರಡಲು ವಿವಿಧ ಶೈಕ್ಷಣಿಕ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿದ್ದೇವೆ ಎಂದರು.