ವ್ಯಕ್ತಿಯೋರ್ವರ ಜೀವ ಉಳಿಸಲು ತನ್ನ ರೈಲನ್ನೇ ತಪ್ಪಿಸಿಕೊಂಡ ಬಂಟ್ವಾಳದ ಆಪದ್ಭಾಂಧವೆ

ಬಂಟ್ವಾಳ: ತಮ್ಮ ರೈಲನ್ನೆ ತಪ್ಪಿಸಿಕೊಂಡು ವ್ಯಕ್ತಿಯೊಬ್ಬರ ನೆರವಿಗೆ ಧಾವಿಸಿ ಅವರ ಪ್ರಾಣ ಉಳಿಸಿದ ಘಟನೆ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಸೆ.28 ರಂದು ಸಂಭವಿಸಿದೆ. ನೆಲ್ಯಾಡಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಹೇಮಾವತಿ ಎನ್ನುವವರೇ ಆ ಆಪದ್ಬಾಂಧವೆ. ಹೇಮಾವತಿ ಅವರು ಸೆ.28 ರಂದು ಬಂಟ್ವಾಳದಿಂದ ಬೆಂಗಳೂರಿಗೆ ಪ್ರಯಾಣಿಸಲು ಬಂಟ್ವಾಳ ರೈಲ್ವೆ ನಿಲ್ದಾಣ್ದಕ್ಕೆ ಬಂದಿದ್ದು, ತಮ್ಮ ರೈಲಿನ ಬರುವಿಕೆಗಾಗಿ ಕಾಯುತ್ತಿದ್ದರು.

ಅದಾಗಲೇ ಅವರ ಬೆನ್ನಹಿಂದೆ ದೊಡ್ಡದಾದ ಒಂದು ಶಬ್ದ ಕೇಳಿಸಿ ಹಿಂತಿರುಗಿ ನೋಡಿದಾಗ ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಹೇಮಾವತಿಯವರು ವ್ಯಕ್ತಿಯ ನೆರವಿಗಾಗಿ ಧಾವಿಸಿದರು. ವ್ಯಕ್ತಿಯು ಬೆವರುತ್ತಿದ್ದು, ಅವರ ಶರೀರ ತಣ್ಣಗಾಗಿತ್ತು. ಹೇಮಾವತಿಯವರು ಸಹಾಯಕ್ಕಾಗಿ ಕೂಗಿದರೂ ತಮ್ಮ ಟ್ರೈನ್ ಅನ್ನು ಹತ್ತುವುದರಲ್ಲೇ ವ್ಯಸ್ತವಾಗಿದ್ದ ಯಾರೋಬ್ಬರೂ ಅವರ ನೆರವಿಗೆ ಬರಲಿಲ್ಲ. ಕಡೆಗೊಬ್ಬ ವ್ಯಕ್ತಿ ಕುಸಿದ ವ್ಯಕ್ತಿಯನ್ನು ಪರೀಕ್ಷಿಸಿ ಅವರು ಅದಾಗಲೇ ಮೃತರಾಗಿದ್ದಾರೆ ಮತ್ತು ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಹೇಮಾವತಿಯವರಿಗೆ ಹೇಳುತ್ತಾರೆ.

“ಆತ ಬದುಕಿದ್ದಾರೆ ಎನ್ನುವುದು ಗೊತ್ತಿತ್ತು ಮತ್ತು ನಾನು ಅವರಿಗಾಗಿ ಪ್ರಾರ್ಥಿಸುತ್ತಿದೆ, ಮತ್ತು ಆಂಬುಲೆನ್ಸ್ ಗೆ ಕರೆ ಮಾಡಲು ಪ್ರಯತ್ನಿಸಿದೆ. ಟ್ರೈನ್ ಅದಾಗಲೇ ಹೋಗಿದ್ದರಿಂದ ಸ್ಟೇಷನ್ ನಲ್ಲಿ ಯಾರೂ ಇರಲಿಲ್ಲ. ಅದೆಲ್ಲಿಂದ ಶಕ್ತಿ ಬಂತೋ ಗೊತ್ತಿಲ್ಲ, ಆ ವ್ಯಕ್ತಿ, ಆತನ ಎರಡು ಬ್ಯಾಗ್ ಮತ್ತು ನನ್ನ ಎರಡು ಬ್ಯಾಗ್ ಸಮೇತ ಸ್ಟೇಷನ್ನಿನಿಂದ ಹೊರಬಂದೆ. ಅಲ್ಲಿಂದ ಒಂದು ಆಟೋ ರಿಕ್ಷಾದಲ್ಲಿ ಅವರನ್ನು ಕುಳ್ಳಿರಿಸಿ ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ಕರೆತಂದೆ. ಆ ವ್ಯಕ್ತಿ ವೈದ್ಯರಾಗಿದ್ದ ತಮ್ಮ ಮಾವನ ದೂರವಾಣಿ ಸಂಖ್ಯೆ ನೀಡಿದರು, ಮತ್ತು ಆತ ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸಲು ಎಲ್ಲ ವ್ಯವಸ್ಥೆ ಮಾಡಿದರು. ಅವರ ಸಂಬಂಧಿಯೊಬ್ಬರು ಬಂದು ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋದರು. ನನಗೆ ತುಂಬಾ ಭಯವಾಗಿತ್ತು, ಅವರು ಬದುಕುಳಿಯಲಾರರು ಎಂದು ಎಲ್ಲರೂ ಹೇಳಿದ್ದರು. ನಾನು ಮರುದಿನ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದೆ” ಎಂದು ಹೇಮಾವತಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾರೆ.

ಅಂದು ಹೇಮಾವತಿಯವರು ಆಪದ್ಬಾಂಧವೆಯಂತೆ ಸಹಾಯಕ್ಕಾಗಿ ಬರದಿದ್ದರೆ ತಾನು ಬದುಕುಳಿಯುತ್ತಿರಲಿಲ್ಲ ಎಂದು ನಿವೃತ್ತ ವ್ಯಾಪಾರಿಯಾದ ಆ ವ್ಯಕ್ತಿ ಹೇಳಿದ್ದಾರೆ. ಅ.17 ರಂದು ಅಕಸ್ಮಾತ್ ಆಗಿ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಪುನಃ ಇವರಿಬ್ಬರ ಭೇಟಿಯಾಗಿದ್ದು, ವ್ಯಕ್ತಿಯು ಅವರನ್ನು ಗುರುತಿಸಿದ್ದಾರೆ ಮತ್ತು ಆಸ್ಪತ್ರೆಯ ವೈದ್ಯರು ಆಕೆಗೆ ಮೆಚ್ಚುಗೆ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.