ಮಂಗಳೂರು: ವಿದ್ಯುತ್ ತಗುಲಿ ಕಾಡಾನೆ ಸಾವು

ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಘಟನೆ ಕಡಬ ತಾಲ್ಲೂಕಿನ ಬಿಳಿನೆಲೆ ಸಮೀಪದ ಪುತ್ತಿಲ ಎಂಬಲ್ಲಿ ಇಂದು ಬೆಳಕಿಗೆ ಬಂದಿದೆ.
ಆಹಾರಕ್ಕಾಗಿ ಮರವೊಂದರ ಗೆಲ್ಲು ಎಳೆಯುತ್ತಿದ್ದಾಗ ಅದು ವಿದ್ಯುತ್ ತಂತಿಗೆ ಸ್ಪರ್ಶಿಸಿ ಆನೆಗೆ ವಿದ್ಯುತ್ ಪ್ರವಹಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಕೊಂಬಾರು ಗ್ರಾಮದ ಕಾಪಾರು ಸುತ್ತಲಿನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೋಟಕ್ಕೆ ದಾಳಿ ನಡೆಸಿದ್ದ ಕಾಡಾನೆ ಅಡಿಕೆ, ಬಾಳೆ, ತೆಂಗು ಸಹಿತ ಅಪಾರ ಪ್ರಮಾಣದ ಬೆಳೆ ನಾಶಗೊಳಿಸಿತ್ತು. ಅದೇ ಒಂಟಿ ಸಲಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ