ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್ ಮಾರ್ಟಂ ಯಾಕೆ ಆಗಿಲ್ಲ: ಮಾಡಿದ್ರೆ ಡ್ರಗ್ಸ್ ಜಾಲದ ಸತ್ಯ ಬಹಿರಂಗ – ಇಂದ್ರಜಿತ್ ಲಂಕೇಶ್

ಬೆಂಗಳೂರು: ಬೆಂಗಳೂರು ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ ಗಳಾದ ಡಿ. ಅನಿಕಾ, ಮೊಹಮ್ಮದ್ ಅನೂಪ ಹಾಗೂ ರಾಜೇಶ್ ರವೀಂದ್ರನ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಸ್ಯಾಂಡಲ್ ವುಡ್ ನಟ ನಟಿಯರಲ್ಲಿ ನಡುಕ ಶುರುವಾಗಿದೆ.

ಈ ನಡುವೆ ಇಂದು ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇತ್ತೀಚೆಗೆ ಮೃತಪಟ್ಟ ಸ್ಯಾಂಡಲ್ ವುಡ್ ನಟ ಪೋಸ್ಟ್ ಮಾರ್ಟಂ ಯಾಕೆ ಮಾಡಿಲ್ಲ. ಮಾಡಿದ್ರೆ ಇಂದು ಪೊಲೀಸರು ಪತ್ತೆಹಚ್ಚಿರುವ ಡ್ರಗ್ಸ್ ಜಾಲದಲ್ಲಿ ಯಾರೆಲ್ಲ ಇದ್ದಾರೆ ಎಂಬುವುದು ಬಹಿರಂಗ ಆಗುತ್ತಿತ್ತು. ಹಾಗೆ ಯಾರೆಲ್ಲ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬುವುದು ಗೊತ್ತಾಗುತ್ತಿತ್ತು. ಯಾವೆಲ್ಲ ನಟ ನಟಿಯರು, ರಾಜಕಾರಣಿಯ ಮಕ್ಕಳು, ಪತ್ರಕರ್ತರು ಇದ್ದಾರೆ ಎಂಬುವುದು ತಿಳಿಯುತ್ತಿತ್ತು.

ಆದರೆ ಪ್ರಭಾವಿಗಳು ಹಾಗೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಆ ನಟನ ಪೋಸ್ಟ್ ಮಾರ್ಟಂ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ವಶದಲ್ಲಿರುವ ಆರೋಪಿ ಅನಿಕಾ, ಡ್ರಗ್ಸ್ ವ್ಯಸನಿಗಳಾಗಿರುವ ಸ್ಯಾಂಡಲ್‌ವುಡ್‌ನ ಕೆಲ ನಟರು ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಸಂಗತಿಯನ್ನು ಬಾಯ್ಬಿಟ್ಟಿದ್ದಾಳೆ. ಆದರೆ ಪೊಲೀಸರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ನಟ ನಟಿಯರ ಮಾಹಿತಿ ಬಹಿರಂಗ ಪಡಿಸಿಲ್ಲ.