ಧಾರವಾಡ: ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಎರಡು ದಶಕಗಳ ಅವಧಿಯಲ್ಲಿ 1,200ಕ್ಕೂ ಹೆಚ್ಚು ಭೂಕುಸಿತಗಳು ಸಂಭವಿಸಿರುವುದಾಗಿ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರಾಧ್ಯಾಪಕರು ನಡೆಸಿದ ಮಹತ್ವದ ಅಧ್ಯಯನ ಬಹಿರಂಗಪಡಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಶೇ. 60.7ರಷ್ಟು ಭೂಕುಸಿತ ಸಂಭವಿಸುವ ಸಂಭಾವ್ಯ ಅಪಾಯವಿದೆ ಎಂಬ ಆತಂಕಕಾರಿ ಅಂಶವನ್ನೂ ಈ ಅಧ್ಯಯನ ಉಲ್ಲೇಖಿಸಿದೆ.
ಸಂಶೋಧನಾ ವರದಿ ಏನಿದೆ?:
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ ವಿನಾಶಕಾರಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ, ಧಾರವಾಡ ಐಐಟಿ ಸಿವಿಲ್ ಮತ್ತು ಮೂಲಸೌಕರ್ಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಮರನಾಥ ಹೆಗಡೆ ಹಾಗೂ ಸಂಶೋಧನಾ ವಿದ್ಯಾರ್ಥಿ ಮಲಯ್ ಪ್ರಾಮಾಣಿಕ್ ಅವರು ಈ ಸಮಗ್ರ ಅಧ್ಯಯನ ಕೈಗೊಂಡಿದ್ದಾರೆ. ಈ ಸಂಶೋಧನಾ ವರದಿ ಪ್ರತಿಷ್ಠಿತ ‘ಜಿಯೋಹಝಾರ್ಡ್ಸ್ ಮೆಕ್ಯಾನಿಕ್ಸ್’ ಅಂತರರಾಷ್ಟ್ರೀಯ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.
ಈ ಅಧ್ಯಯನದಲ್ಲಿ ಶಿರೂರು ಗುಡ್ಡ ಕುಸಿತದ ಉಪಗ್ರಹ ಚಿತ್ರಗಳು, ಹಿಂದಿನ ಭೂಕುಸಿತಗಳ ದಾಖಲೆಗಳು, ಮಣ್ಣಿನ ಸ್ವಭಾವ, ಇಳಿಜಾರಿನ ತೀವ್ರತೆ, ವಾರ್ಷಿಕ ಮಳೆ ಪ್ರಮಾಣ ಸೇರಿದಂತೆ ಅನೇಕ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಇದರ ಆಧಾರದ ಮೇಲೆ ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಭೂಕುಸಿತ ಅಪಾಯ ವಲಯಗಳನ್ನು ವರದಿ ಸ್ಪಷ್ಟವಾಗಿ ಗುರುತಿಸಿದೆ.
ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವೇ ಶೇ. 30ರಷ್ಟು ಭೂಕುಸಿತಗಳು ದಾಖಲಾಗಿವೆ ಎಂದು ಅಧ್ಯಯನ ತಿಳಿಸಿದೆ. ಕಳೆದ ಎರಡು ದಶಕಗಳಲ್ಲಿ ಇಲ್ಲಿ 500ಕ್ಕೂ ಹೆಚ್ಚು ಭೂಕುಸಿತ ಪ್ರಕರಣಗಳು ನಡೆದಿವೆ. ನಂತರದ ಸ್ಥಾನಗಳಲ್ಲಿ ಶಿವಮೊಗ್ಗ (ಶೇ. 17.8), ಚಿಕ್ಕಮಗಳೂರು (ಶೇ. 17), ಕೊಡಗು (ಶೇ. 13.88), ದಕ್ಷಿಣ ಕನ್ನಡ (ಶೇ. 9.63), ಹಾಸನ (ಶೇ. 8.26) ಹಾಗೂ ಉಡುಪಿ (ಶೇ. 4) ಜಿಲ್ಲೆಗಳು ಸೇರಿವೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭೂಕುಸಿತಗಳಿಗೆ ಮೂರು ಪ್ರಮುಖ ಕಾರಣಗಳು ಗುರುತಿಸಲಾಗಿದೆ. ವಾರ್ಷಿಕವಾಗಿ 3,000 ಮಿಮೀಗಿಂತ ಹೆಚ್ಚಿನ ಮಳೆ, ಮಣ್ಣಿನ ದುರ್ಬಲ ರಚನೆ ಹಾಗೂ 28 ಡಿಗ್ರಿಗಿಂತ ಹೆಚ್ಚಿನ ಕಡಿದಾದ ಇಳಿಜಾರು ಪ್ರದೇಶಗಳು ಭೂಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಶಿರೂರು ಭೂಕುಸಿತದ ವೇಳೆ 3,000 ಮಿಮೀಗಿಂತ ಹೆಚ್ಚಿನ ಮಳೆ ದಾಖಲಾಗಿದ್ದು, ಅಲ್ಲಿನ ಜೇಡಿಮಣ್ಣು ಹಾಗೂ ಸುಮಾರು 31 ಡಿಗ್ರಿಗಳ ಇಳಿಜಾರಿನ ಗುಡ್ಡಭಾಗವೇ ಅಪಾಯವನ್ನು ಹೆಚ್ಚಿಸಿತ್ತು.
ಶತಮಾನಗಳಿಂದ ನೈಸರ್ಗಿಕವಾಗಿ ಹರಿದುಕೊಂಡು ಬಂದ ಮಳೆ ನೀರಿನ ಹರಿವಿಗೆ ಅಡ್ಡಿಯಾಗಿರುವುದು, ರಾಷ್ಟ್ರೀಯ ಹೆದ್ದಾರಿ–52ರ ವಿಸ್ತರಣೆ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳನ್ನು ಅವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿರುವುದೂ ಭೂಕುಸಿತಕ್ಕೆ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದೆ. ಹಲವು ರಸ್ತೆ ಯೋಜನೆಗಳಲ್ಲಿ ವೈಜ್ಞಾನಿಕ ಬೆಂಬಲ ಗೋಡೆಗಳನ್ನು ನಿರ್ಮಿಸದೆ ಗುಡ್ಡಗಳ ತುದಿಯನ್ನು ಕತ್ತರಿಸಿರುವುದರಿಂದ ಮಣ್ಣಿನಲ್ಲಿ ನೀರು ಸೋರಿಕೆ ಉಂಟಾಗಿ ಭೂಕುಸಿತಗಳು ಸಂಭವಿಸುತ್ತಿವೆ.
ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡು ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಅಭಿವೃದ್ಧಿ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪದೇ ಎದುರಾಗಲಿದೆ ಎಂದು ಅಧ್ಯಯನ ಎಚ್ಚರಿಸಿದೆ.
















