ಬಂಟ್ವಾಳದ ಸಮಗ್ರ ಅಭಿವೃದ್ದಿಗಾಗಿ ರಮಾನಾಥ್ ರೈ ಅವರನ್ನು ಗೆಲ್ಲಿಸೋಣ: ಜಯಂತಿ ಪೂಜಾರಿ

ಬಂಟ್ವಾಳ: ಮಹಿಳೆಯರಿಗೆ ಸುರಕ್ಷಿತ, ಸುಭದ್ರ ಮತ್ತು ಸಮೃದ್ಧಿದಾಯಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಘೋಷಿಸಿದ್ದು, ಇಂತಹ ದೂರದೃಷ್ಟಿಯುಳ್ಳ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ರಾಜ್ಯದಲ್ಲಿ ಸುಸ್ಥಿರ ಸರಕಾರ ರಚಿಸಲು ನೆರವಾಗುವಂತೆ ಬಂಟ್ವಾಳ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದರು.

ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದೆ. ಬೆಲೆ ಏರಿಕೆ ಗಗನಕ್ಕೇರಿರುವ ಇಂತಹ ಸಂದರ್ಭದಲ್ಲಿ ಮನೆ ನಿರ್ವಹಿಸಲು ಮಹಿಳೆಯರಿಗೆ ಅನುಕೂಲವಾಗುವಂತಹ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂಬುದಾಗಿ ನಮ್ಮ ನಾಯಕರು ಭರವಸೆ ನೀಡಿದ್ದಾರೆ ಎಂದರು.

ಮನೆ ಯಜಮಾನಿಗೆ ತಿಂಗಳಿಗೆ ರೂ. 2,000, ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಪದವೀಧರ ನಿರುದ್ಯೋಗಿಗಳಿಗೆ ಯುವನಿಧಿ, ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಸರಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಇವು ಕಾಂಗ್ರೆಸ್ ಗ್ಯಾರಂಟಿಗಳಾಗಿವೆ. ಇನ್ನುಳಿದಂತೆ, ವಿಧವಾ ಪಿಂಚಣಿ 2,500ಕ್ಕೆ ಹೆಚ್ಚಳ, ದುಡಿಯುವ ಮಹಿಳೆಯರಿಗೆ 100 ಹಾಸ್ಟೆಲ್ ಗಳ ನಿರ್ಮಾಣ, ಕೈಗಾರಿಕಾ ಪಾರ್ಕ್‍ಗಳಲ್ಲಿ ಶೇ.20ರಷ್ಟು ನಿವೇಶನ ಮಹಿಳಾ ಉದ್ಯಮಿಗಳಿಗೆ ಮೀಸಲು, 5 ಸಾವಿರ ಸ್ತ್ರೀಶಕ್ತಿ ಕಿರು ಉದ್ಯಮಕ್ಕೆ ಸಹಕಾರ, ಹೈಸ್ಕೂಲ್, ಪಿಯುಸಿಗಳಲ್ಲಿ ವಿಧ್ಯಾಭ್ಯಾಸ ಕೈಬಿಟ್ಟ ಮಹಿಳೆಯರಿಗೆ ಆರ್ ಟಿಒಗಳಲ್ಲಿ ಉಚಿತ ವಾಹನ ಚಾಲನೆ ತರಬೇತಿ ಹಾಗೂ ಅವರಿಗೆ ಸಬ್ಸಿಡಿಯಲ್ಲಿ ಆಟೊರಿಕ್ಷಾ, ಕಾರು ನೀಡುವ ಭರವಸೆಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೂ ಹಲವಾರು ವಿಶೇಷ ಸೌಲಭ್ಯಗಳನ್ನು ಘೋಷಿಸಲಾಗಿದೆ ಎಂದರು.

ಈ ಎಲ್ಲಾ ಭರವಸೆಗಳು ಈಡೇರಬೇಕಾದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ, ಅತ್ಯಂತ ಪಾರದರ್ಶಕ, ಪ್ರಾಮಾಣಿಕ ವ್ಯಕ್ತಿತ್ವದ ಬಿ.ರಮಾನಾಥ ರೈಯವರು ಗೆಲ್ಲಬೇಕು. ಅವರಿಂದಾಗಿ ಬಂಟ್ವಾಳದ ಸಮಗ್ರ ಅಭಿವೃದ್ಧಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಇನ್ನಷ್ಟು ಅಭಿವೃದ್ಧಿ ಹೊಂದಲು, ಕ್ಷೇತ್ರದ ಜನರ ಜೀವನದ ಗುಣಮಟ್ಟ ಸುಧಾರಿಸಲು ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಗೆಲ್ಲಿಸೋಣ ಎಂದು ಕರೆ ನೀಡಿದರು.

ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವೀನಾ ಮೋರಸ್, ಪುರಸಭಾ ಮಾಜಿ ಅಧ್ಯಕ್ಷೆ ಜೋಸ್ಪಿನ್ ಡಿಸೋಜ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಪುರಸಭಾ ಮಾಜಿ ಸದಸ್ಯರುಗಳಾದ ಧನವಂತಿ, ವಲರಿ, ಸಂಘಟನಾ ಕಾರ್ಯದರ್ಶಿ ಫೌಝಿಯಾ, ಡಿಸಿಸಿ ಸದಸ್ಯೆ ಫ್ಲೋಸಿ ಡಿಸೋಜ, ಪಾಣೆಮಂಗಳೂರು ಬ್ಲಾಕ್ ಸದಸ್ಯೆ ಶೋಭಾ ಶೆಟ್ಟಿ, ಬಂಟ್ವಾಳ ಬ್ಲಾಕ್ ಸದಸ್ಯೆ ಶಭಾನ ಮತ್ತಿತರರು ಉಪಸ್ಥಿತರಿದ್ದರು.