ವಿನೋಬಾ ಭಾವೆ ಅವರ ಭೂದಾನ ಚಳುವಳಿ ಗಾಂಧಿತತ್ವದ ಶ್ರೇಷ್ಠ ಉದಾಹರಣೆ: ವಿಶಂಬರನಾಥ್ ಅಗರ್ವಾಲ್

ಮಣಿಪಾಲ: ಭೂದಾನ ಆಂದೋಲನವು ಆಚಾರ್ಯ ವಿನೋಬಾ ಭಾವೆಯವರ ಒಂದು ಅನನ್ಯ ಕೊಡುಗೆಯಾಗಿದೆ ಮತ್ತು ಇದರ ತತ್ವ ಮತ್ತು ಕಾರ್ಯ ನಿಜವಾದ ಅರ್ಥದಲ್ಲಿ ಗಾಂಧಿವಾದದ ಮೇಲೆ ನಿಂತಿದೆ ಎಂದು ವಿದ್ವಾಂಸ ವಿಶಂಬರನಾಥ್ ಅಗರ್ವಾಲ್ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ವಿನೋಬಾ ಭಾವೆ: ಜೀವನ ಮತ್ತು ತತ್ವ’ ಕುರಿತ ಉಪನ್ಯಾಸದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ವಯಂಪ್ರೇರಿತವಾಗಿ ಭೂಮಿ ಅಥವಾ ಹಣವನ್ನು ದಾನ ಮಾಡುವುದು ಹೆಚ್ಚು ಮಾನವೀಯ ಸಮಾಜವನ್ನು ರೂಪಿಸುವತ್ತ ನಿಜವಾದ ಗಾಂಧಿತತ್ವದ ಹೆಜ್ಜೆಯಾಗಿದೆ ಮತ್ತು ವಿನೋಬಾ ಅವರ ಭೂದಾನ ಚಳುವಳಿ ಅಂತಹ ಪ್ರಯತ್ನಕ್ಕೆ ಶ್ರೇಷ್ಠ ಉದಾಹರಣೆ. ತಾತ್ವಿಕವಾಗಿ, ವಿನೋಬಾ ಅವರು ‘ಶಂಕರ, ಗಾಂಧಿ ಮತ್ತು ಕ್ರಿಸ್ತನ’ ಯೋಚನೆಗಳ ಸಂಯೋಜನೆಯನ್ನು ಪ್ರತಿನಿಧಿಸಿದರು. ಕುರಾನ್ ಧರ್ಮಗ್ರಂಥವನ್ನು ಮೂಲದಲ್ಲೇ ಓದುವ ಸಲುವಾಗಿ ಅರೇಬಿಕ್ ಕಲಿತ ಅವರು ಎಲ್ಲಾ ಧರ್ಮಗಳ ಸಾರವನ್ನು ಅರಿಯಲು ಪ್ರಯತ್ನಿಸಿದರು. ಧರ್ಮ ಮತ್ತು ದೇಶದ ಸೀಮೆಯನ್ನು ದಾಟಿ ಜಗತ್ತಿನ ಕಲ್ಯಾಣ ಎಂಬರ್ಥದ ‘ಜೈ ಜಗತ್’ ಘೋಷಣೆಗೆ ಅವರು ಒತ್ತು ನೀಡಿದರು ಎಂದು ಅಗರ್ವಾಲ್ ಹೇಳಿದರು.

ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮ ನಡೆಸಿಕೊಟ್ಟರು. ಫಿಲಾಸಫಿ ಕ್ಲಬ್ ಸಂಯೋಜಕ ಮಲ್ಲೆಂ ಡೆಸ್ಮಂಡ್ ದಾಸ್ ಮತ್ತು ಯಶಸ್ವಿನಿ ಜಿ ಕಾರ್ಯಕ್ರಮವನ್ನು ಆಯೋಜಿಸಿದರು. ಕಾರ್ಯಕ್ರಮದಲ್ಲಿ ಪ್ರೊ.ಕೆ.ಪಿ.ರಾವ್, ಡಾ.ಪ್ರಭಾಕರ ಶಾಸ್ತ್ರಿ, ಸುಬ್ರಹ್ಮಣ್ಯ ಬಾಸ್ರಿ ಮತ್ತಿತರರು ಉಪಸ್ಥಿತರಿದ್ದರು.