ವಿನಯ್​ ರಾಜ್​ಕುಮಾರ್​ಗೆ ಸ್ಟಾರ್​ ತಾರೆಯರು ಸಾಥ್​ ‘ಗ್ರಾಮಾಯಣ’ ಚಿತ್ರಕ್ಕೆ ಅದ್ದೂರಿ ಚಾಲನೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಸ್ಟಾರ್‌ಗಿರಿ ಗಿಟ್ಟಿಸಿಕೊಂಡಿರುವ ನಟ ವಿನಯ್ ರಾಜ್​ಕುಮಾರ್ ಸದ್ಯ ‘ಗ್ರಾಮಾಯಣ’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ.

ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಆರಂಭ ಫಲಕ ತೋರಿದರು. ಅಶ್ವಿನಿ ಪುನೀತ್ ರಾಜ್​ಕುಮಾರ್ ಕ್ಯಾಮರಾ ಚಾಲನೆ ಮಾಡಿದರು.

ನಟ ವಿನಯ್​ ರಾಜ್​ಕುಮಾರ್ ಅಭಿನಯದ ‘ಗ್ರಾಮಾಯಣ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು.

ನಟ ರಾಘವೇಂದ್ರ ರಾಜ್​ಕುಮಾರ್, ಪತ್ನಿ ಮಂಗಳ ರಾಘವೇಂದ್ರ ರಾಜ್​ಕುಮಾರ್, ನಟ ದುನಿಯಾ ವಿಜಯ್, ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ, ನಟ ರಾಜ್ ಬಿ ಶೆಟ್ಟಿ, ಆರ್.ಚಂದ್ರು, ನಿರ್ದೇಶಕ ಪವನ್ ಒಡೆಯರ್, ಸಿಂಪಲ್ ಸುನಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ವಿನಯ್ ರಾಜ್​ಕುಮಾರ್​ ಚಿತ್ರಕ್ಕೆ ಸಾಥ್ ನೀಡಿದರು.

ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ದೇವನೂರು ಚಂದ್ರು, “ಗ್ರಾಮಾಯಣ, ಇದು ಗ್ರಾಮದಲ್ಲೇ ನಡೆಯುವ ಕಥೆ. ಸಿಂಪಲ್ ಸುನಿ ಅವರ ಮದುವೆ ಸಂದರ್ಭದಲ್ಲಿ ವಿನಯ್ ರಾಜ್​ಕುಮಾರ್ ಅವರನ್ನು ನಾನು ಭೇಟಿ ಮಾಡಿದ್ದೆ. ಅವರನ್ನು ನೋಡಿದ ಕೂಡಲೇ ಈ ಕಥೆಗೆ ಇವರೇ ಸೂಕ್ತ ನಾಯಕ ಅಂದುಕೊಂಡೆ. ಅವರಿಗೆ ಕಥೆಯನ್ನು ವಿವರಿಸಿದಾಗ ಒಪ್ಪಿದರು. ನೀವು ಈವರೆಗೂ ನೋಡಿರದ ವಿನಯ್ ರಾಜ್​ಕುಮಾರ್ ಅವರನ್ನು ಈ ಚಿತ್ರದಲ್ಲಿ ನೋಡುತ್ತೀರ” ಎಂದರು.

ಮುಂದುವರೆದು, “ಸಿನಿಮಾದ ಚಿತ್ರೀಕರಣವನ್ನು ಚಿಕ್ಕಮಗಳೂರು, ದೇವರಾಯಸಮುದ್ರ, ಅರಸಿಕೆರೆ, ಕಡೂರು ಸುತ್ತಮುತ್ತ ಮಾಡಲಿದ್ದೇವೆ.

ಯಶಸ್ವಿನಿ ಅಂಚಲ್ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಅಪರ್ಣ(ನಿರೂಪಕಿ), ಸೀತಾ ಕೋಟೆ, ಶ್ರೀನಿವಾಸ ಪ್ರಭು, ಮಂಜುನಾಥ್ ಹೆಗೆಡೆ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ” ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು ನಿರ್ಮಾಪಕರಾದ ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ಅವರಿಗೆ ಧನ್ಯವಾದ ತಿಳಿಸಿದರು.
“UI ಚಿತ್ರದ ಸೆಟ್​ನಲ್ಲಿ ಗ್ರಾಮಾಯಣ ಚಿತ್ರದ ಟೀಸರ್ ನೋಡಿದೆ. ಟೀಸರ್​ಗೆ ತುಂಬಾ ಪಾಸಿಟಿವ್ ಕಾಮೆಂಟ್ಸ್​ಗಳು ಬಂದಿದ್ದವು. ಇಂತಹ ಒಳ್ಳೆಯ ಚಿತ್ರ ನಿಲ್ಲಬಾರದು ಎಂದು ಲಹರಿ ಫಿಲಂಸ್ ಜೊತೆ ಸೇರಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ನಿರ್ಮಾಕರ ಕೆ.ಪಿ ಶ್ರೀಕಾಂತ್​ ಹೇಳಿದರು.

ಇನ್ನು ಸಹ ನಿರ್ಮಾಪಕ ನವೀನ್ ಮನೋಹರನ್, ಕಲಾವಿದರಾದ ಅರುಣ್ ಸಾಗರ್, ಗೋಪಾಲಕೃಷ್ಣ ದೇಶಪಾಂಡೆ ಗ್ರಾಮಾಯಣ ಸಿನಿಮಾ ಕುರಿತು ಮಾತನಾಡಿದರು. ಸದ್ಯ ಪೋಸ್ಟರ್​ನಿಂದಲೇ ಸದ್ದು ಮಾಡುತ್ತಿರುವ ಗ್ರಾಮಾಯಣ ಇದೇ ವರ್ಷ ತೆರೆಗೆ ಬರಲಿದೆ.

ಬಳಿಕ ನಟ ವಿನಯ್ ರಾಜ್​ಕುಮಾರ್ ಮಾತನಾಡಿ, “ಈಗಿನ ಯುವಕರ ದೃಷ್ಟಿಕೋನದಲ್ಲಿ ಹಳ್ಳಿ ಹೇಗೆ ಕಾಣಿಸುತ್ತದೆ ಎನ್ನುವುದೇ ‘ಗ್ರಾಮಾಯಣ’. ನಾನು ಈವರೆಗೂ ಮಾಡಿರದ ಪಾತ್ರವಿದು.

ಚಂದ್ರು ಅವರು ಕಥೆ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ನಿರ್ಮಾಪಕರಿಗೆ ನನ್ನ ಧನ್ಯವಾದಗಳು” ಎಂದರು.