ವಿಧವೆ ಸೊಸೆಗೆ‌ ಮದುವೆ ಮಾಡಿಸಿದ ಅತ್ತೆ..! 

ಮಂಗಳೂರು: ಅತ್ತೆಯೇ ವಿಧವೆ ಸೊಸೆಗೆ ಮದುವೆ ಮಾಡಿಸಿದ ಅಪರೂಪದ, ಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಬೆಳ್ಳಾರೆಯ ಕೋಟೆ ದೇವಸ್ಥಾನದಲ್ಲಿ ಸೋಮವಾರ ಈ ಅಪರೂಪದ ಮದುವೆ ಸಮಾರಂಭ ನಡೆದಿದೆ.
ಸುಳ್ಯ ತಾಲೂಕಿನ ಕಳಂಜ ಗ್ರಾಮದ ಗೋಪಾಲಕಜೆ ನಿವಾಸಿ ಶಾಂತಪ್ಪ ಗೌಡರ ಪುತ್ರಿ ಸುಶೀಲಾ ಎಂಬುವವರನ್ನು ಅದೇ ಗ್ರಾಮದ ದಿವಂಗತ ಪದ್ಮಯ್ಯರ ಪುತ್ರ ಮಾಧವ ಎಂಬುವವರಿಗೆ ವಿವಾಹ ಮಾಡಿ‌ ಕೊಡಲಾಗಿತ್ತು.
ಆದರೆ ವಿವಾಹವಾದ ವರ್ಷದೊಳಗೆ ಅಪಘಾತದಿಂದ ಮಾಧವ ಇಹಲೋಕ ತ್ಯಜಿಸಿದ್ದರು. ಅದಾಗಲೇ ಗರ್ಭಿಣಿಯಾಗಿದ್ದ ಸುಶೀಲಳ ಚಿಗುರುತ್ತಿದ್ದ ಬದುಕು ಮೊಗ್ಗಾಗಿರುವಾಗಲೆ ಚಿವುಟಿ ಹೋಗಿತ್ತು. ಪತಿಯ ಮನೆಯವರು ಚಿಕ್ಕ ವಯಸ್ಸಿನ ಸೊಸೆಯ ಬದುಕು ಹಾಳಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿ ಮರುಮಾಂಗಲ್ಯಕ್ಕೆ ನಿಶ್ಚಯಿಸಿದ್ದರು. ಅದರಂತೆಯೇ ಪತಿಯ ಅಮ್ಮಾ ಕುಂಞ್ಯಕ್ಕಳ ಮುತ್ತು ವರ್ಜಿಯಲ್ಲಿ ಬಂಟ್ವಾಳ ತಾಲೂಕಿನ ಕನ್ಯಾನದ ಜಯಪ್ರಕಾಶ್ ಎಂಬವರೊಂದಿಗೆ ಕೋಟೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹೋತ್ಸವ ನೆರವೇರಿಸಿ ಆದರ್ಶ ಅತ್ತೆಯಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಕಜೆಮೂಲೆಯ ಎತ್ತರ ಪ್ರದೇಶವೊಂದರ ಬಳಿ ಭೀಕರ ಟ್ರಾಕ್ಟರ್ ಪಲ್ಟಿ ದುರಂತ ನಡೆದಿತ್ತು.‌ ಈ ವೇಳೆ ಸುಶೀಲಳ ಮೊದಲ ಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ವಿಧವೆಯಾದ ಸುಶೀಲರು ಮಗನ ಭವಿಷ್ಯಕ್ಕಾಗಿ ಮರು ಮದುವೆಯಾಗದಿರಲು ನಿಶ್ಚಯಿಸಿದ್ದರು. ಕೊನೆಗೂ ಯುವತಿ ಪತಿ ಮನೆಯವರ ಸತತ ಪ್ರಯತ್ನಗಳ ನಂತರ ಮರು ಮದುವೆಗೆ ಒಪ್ಪಿಗೆ ಸೂಚಿಸಿದರು. ವಿಶೇಷವೆಂದರೆ ಮೊದಲನೆ ವಿವಾಹ ಕೂಡ ಮೂರು ವರ್ಷಗಳ ಹಿಂದೆ ಕೋಟೆ ದೇವಸ್ಥಾನದಲ್ಲಿಯೇ ನಡೆದಿತ್ತು.