ಕರಾವಳಿ ಸೊಗಡಿನ ಮತ್ತೊಂದು ಚಿತ್ರ “ವೇಷ” ಚಿತ್ರದ ಟ್ರೈಲರ್ ಬಿಡುಗಡೆ

ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ “ವೇಷ” ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಯಾವುದೊ ಒಂದು ಸಂದರ್ಭದಲ್ಲಿ ನಾಯಕ “ವೇಷ” ಹಾಕುವ ಹಾಗೆ ಸಂದರ್ಭ ಎದುರಾಗುತ್ತದೆ. ಟ್ರೇಲರ್ ಮೂಲಕ ಹೊರಬಂದಿರುವ “ವೇಷ” ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ತನಕ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎನ್ನುತ್ತಾರೆ ವೇಷ ಚಿತ್ರದ ನಿರ್ದೇಶಕ ಕೃಷ್ಣ ನಾಡ್ಪಾಲ್.

ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕ ನಟನಾಗಿ ಅಭಿನಯಿಸಿರುವ ಕೃಷ್ಣ ನಾಡ್ಪಾಲ್ ನಿರ್ದೇಶನದ “ವೇಷ” ಚಿತ್ರದ ಟ್ರೇಲರ್ ಇತ್ತೀಚೆಗೆ A2 ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಯಿತು.

ಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ ಇವರು ವೇಷ ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಿರ್ಮಾಣವನ್ನು ಮಾಡಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ನಾಯಕ ರಘು ಹೇಳಿದರು.

ನಿರ್ಮಾಪಕ ರಾಘವೇಂದ್ರ, ನಾಯಕಿ ನಿಧಿ ಮಾರೋಲಿ, ಸೌಖ್ಯ ಗೌಡ, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಜಯ್ ಶೆಟ್ಟಿ, ರಾಜ ಅಲಿ, ಲಿಖಿತ ಶೆಟ್ಟಿ ಬುದಾಡಿ, ನೇಹಾ ಗೌಡ, ಶಿಲ್ಪ ಕುಮಟಾ, ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಹಾಗೂ ಕ್ರಿಯೇಟಿವ್ ಹೆಡ್ ಕೀರ್ತನ್ ಶೆಟ್ಟಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ನ ಮಾಲೀಕ ವೆಂಕಟ್ ಗೌಡ ಹೊತ್ತುಕೊಂಡಿದ್ದಾರೆ.