ಜು. 23 ರಂದು ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ- 2023

ಉಡುಪಿ: ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು, ಮಣಿಪಾಲ ಮತ್ತು ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು, ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು – ಹಣ್ಣು ಹಂಪಲು, ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ- 2023 ಕಾರ್ಯಕ್ರಮವನ್ನು ಜು. 23 ರಂದು ಬೆಳಿಗೆ 8.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ರತ್ನ ಸಂಜೀವ ಕಲಾಮಂಡಲದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶ್ ಪಾಲ್‌ ಸುವರ್ಣ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಸ್ಯೋತ್ಸವದಲ್ಲಿ ತೋಟಗಾರಿಕಾ ಇಲಾಖೆಯ ಎಲ್ಲಾ ಪ್ರಕಾರದ ಹೂವಿನ ಗಿಡಗಳು (ದಾಸವಾಳ, ಗುಲಾಬಿ, ನಂದಿ ಬಟ್ಟಲು, ಲಕ್ಷ್ಮೀತರು ಇತ್ಯಾದಿ), ಕಸಿ ಮಾವಿನ ಗಿಡಗಳು (ಆಲ್ಫಾನೋ, ಮಲ್ಲಿಕಾ, ಬಂಗನಪಲ್ಲಿ, ಮಲಗೋವಾ ಇತ್ಯಾದಿ), ಚಿಕ್ಕು, ಪೇರಳೆ, ಲಕ್ಷ್ಮಣ ಫಲ, ರಂಬುಟಾನ್, ಲಿಂಬೆ, ಕರಿಬೇವು ಸೊಪ್ಪು, ಅಡಿಕೆ, ತೆಂಗು, ಜಾಂಬು, ಕಾಳು ಮೆಣಸು, ಮಜ್ಜಿಗೆ ಹುಲ್ಲು, ಹಾಗೆಯೇ ಅರಣ್ಯ ಸಂಪತ್ತುಗಳಾದ ಸಾಗುವಾನಿ, ಶ್ರೀಗಂಧ, ರಕ್ತ ಚಂದನ, ಬಿಲ್ಪತ್ರೆ ಮುಂತಾದ ಗಿಡಗಳು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ 15,000 ಗಿಡಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ಉಡುಪಿ ಇಂದ್ರಾಳಿಯ ಉಪವನ ನರ್ಸರಿ ಸಂಸ್ಥೆಯು ಈ ಕಾರ್ಯಕ್ರಮದ ಸಹಭಾಗಿತ್ವ ವಹಿಸಿ ಎಲ್ಲಾ ಸಸ್ಯಗಳ ಪೂರೈಕೆಯನ್ನು ಮಾಡುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್, ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಇದರ ಅಧ್ಯಕ್ಷಗುರುರಾಜ್ ಭಂಡಾರಿ ಸರಳೇಬೆಟ್ಟು, ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು, ಕಾರ್ಯಕ್ರಮದ ಸಂಚಾಲಕ ಮಂಜುನಾಥ್ ಮಣಿಪಾಲ್ ಹಾಜರಿದ್ದರು.