ವನಸ್ಥಾ ಆಗ್ರೋ ಫುಡ್ ಸಂಸ್ಥೆಯ ಆಹಾರೋತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ವನಸ್ಥಾ ಆಗ್ರೋ ಫುಡ್ ಪ್ರೈ ಲಿ. ಸಂಸ್ಥೆಯ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಾರಂಭವು ಬೆಂಗಳೂರಿನ ರಾಜಭವನ ರಸ್ತೆಯ ವಸಂತನಗರದಲ್ಲಿರುವ “ದ ಕ್ಯಾಪಿಟಲ್” ಹೋಟೇಲಿನಲ್ಲಿ ಶನಿವಾರ ನಡೆಯಿತು.

ಬಿಗ್_ಬಾಸ್ ಸೀಝನ್-7ರ ವಿಜೇತ ಹಾಗೂ ಉದಯೋನ್ಮುಖ ಚಲನಚಿತ್ರ ನಟ ಶೈನ್ ಶೆಟ್ಟಿ ‘’ವನಸ್ಥಾ’’ ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ. ಅವರು ಇಂದು ಅಧಿಕೃತವಾಗಿ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಅವಧೂತ ಶ್ರೀ ವಿನಯ ಗುರೂಜಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಾಸ್ಟ್‌ ಫುಡ್‌ ಲೈಪ್‌ ನಲ್ಲಿ ಮರೆಯಾಗುತ್ತಿರುವ ಪಾರಂಪರಿಕ ರುಚಿಯನ್ನು ಮತ್ತೆ ಜನರ ಮುಂದೆ ತರುವ ವನಸ್ಥಾ ಸಂಸ್ಥೆಯ ಪ್ರಯತ್ನ ಮೆಚ್ಚುವಂಥದ್ದು. ಸಂಸ್ಥೆಯು ರಾಸಾಯನಿಕ ಮುಕ್ತವಾದಂತಹ ಅನೇಕ ಬಗೆ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ಸಮಾಜದ ಆರೋಗ್ಯದ ದೃಷ್ಟಿಯಿಂದ ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು.

ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ನಟರಾಜ್ ಕಲ್ಯಾಣಿ, ನಿರ್ದೇಶಕ ರಾಮ್ ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಲಬೆರಕೆ ಹಾಗೂ ರಾಸಾಯನಿಕ ಮುಕ್ತ, ಕೃತಕ ಬಣ್ಣ, ಸಂರಕ್ಷಕಗಳನ್ನು ಬಳಸದೆ; ಗ್ರಾಹಕರ ಆರೋಗ್ಯದ ಏಕನಿಷ್ಠ ಕಾಳಜಿಯೊಂದಿಗೆ ನೈಸರ್ಗಿಕವಾಗಿ ಆಹಾರ ಪದಾರ್ಥಗಳು ಹಾಗೂ ಮಸಾಲೆಗಳನ್ನು ಉತ್ಪಾದಿಸುವ ಉದ್ದೇಶದೊಂದಿಗೆ ವನಸ್ಥಾ ಆಗ್ರೋ ಫುಡ್ ಸಂಸ್ಥೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕರಾವಳಿ ಸೊಗಡನ್ನು ಹೊಂದಿದ್ದು, ನಾಡಿನಾದ್ಯಂತ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು‌ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ನಟರಾಜ್ ಕಲ್ಯಾಣಿ ಹೇಳಿದರು.