ಕುಂದಾಪುರ: ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ಸಾಗಿಸಿದ ತಾಲೂಕಾಡಳಿತ, ಕಾರ್ಮಿಕರಿಗೀಗ ಕೊಂಚ ನಿರಾಳ

ಕುಂದಾಪುರ : ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಕಾರಣಗಳಿಂದಾಗಿ ಊರಿಗೆ ತೆರಳಲಾಗದೆ ಕುಂದಾಪುರ ಹಾಗೂ ಕೋಟೇಶ್ವರದಲ್ಲಿನ ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಇದ್ದ ಉತ್ತರ ಕರ್ನಾಟಕ ಭಾಗದ  ವಲಸೆ ಕಾರ್ಮಿಕರನ್ನ ಶನಿವಾರ ಅವರವರ ಊರುಗಳಿಗೆ ವಾಹನಗಳಲ್ಲಿ ಕಳುಹಿಸಿ ಕೊಡಲಾಯಿತು.
ಬಸ್ಸಿನಲ್ಲಿನ ಆಸನಗಳಲ್ಲಿ ತಲಾ ಒಬ್ಬರಂತೆ ಸೀಮಿತ ಸಂಖ್ಯೆಯ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತೀ ಬಸ್ ನಲ್ಲೂ ಓರ್ವ ಗ್ರಾಮಕರಣಿಕ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗಳನ್ನು ಕಳುಹಿಸಲಾಗಿದೆ.‌ ಊರು ತಲುಪಿದ‌ ಬಳಿಕ ಅಲ್ಲಿನ‌ ತಹಸೀಲ್ದಾರರಿಗೆ ಮಾಹಿತಿ ನೀಡಿ ಸಹಿ ಪಡೆದುಕೊಂಡು ಅಧಿಕಾರಿಗಳು ಹೋದ ಬಸ್ ನಲ್ಲೇ ಮರಳಿ ಬರಲಿದ್ದಾರೆ.
ಪ್ರಯಾಣ ಆರಂಭಿಸುವ ಮೊದಲು ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಕೋಟೇಶ್ವರ ಕೇಂದ್ರದ 117 ಹಾಗೂ ಕುಂದಾಪುರ ಕೇಂದ್ರದ 86 ಮಂದಿ ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಕುಂದಾಪುರ ಉಪ ವಿಭಾಗಾಧಿಕಾರಿ ಕೆ. ರಾಜು, ತಹಶೀಲ್ದಾರ್ ತಿಪ್ಪೇಸ್ವಾಮಿ, ನಗರ ಠಾಣೆಯ ಪಿಎಸ್ಐ ಹರೀಶ್ ಆರ್ ನಾಯ್ಕ್ ಇದ್ದರು.