ರಾಜ್ಯದಲ್ಲಿ ಮುಂದಿನ ವಾರದಿಂದ ಅನ್ ಲಾಕ್ ಪ್ರಕ್ರಿಯೆ ಶುರು: ಕಂದಾಯ ಸಚಿವ ಆರ್. ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಾರದಿಂದ ಅನ್‌ಲಾಕ್ ಪ್ರಕ್ರಿಯೆ ಶುರುವಾಗುವುದು ಖಚಿತಗೊಂಡಿದ್ದು, ನಾಲ್ಕರಿಂದ ಐದು ಹಂತಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರ ನಿರ್ಧರಿಸಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಸುಳಿವು ನೀಡಿದರು.
ಒಮ್ಮೆಲೆಯೇ ತೆರವುಗೊಳಿಸಿದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಾಣುವ ಅಪಾಯವಿದೆ. ಹೀಗಾಗಿ ಹಂತ ಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.

ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿದ ಸಮಯವನ್ನು 12 ಗಂಟೆಯವರೆಗೆ ವಿಸ್ತರಿಸಲಾಗುತ್ತದೆ. ವ್ಯಾಯಾಮ ಮತ್ತು ವಾಯುವಿಹಾರಕ್ಕಾಗಿ ಉದ್ಯಾನಗಳಿಗೆ ಭೇಟಿ ನೀಡಲು ಅವಕಾಶ ನೀಡುವ ಬಗ್ಗೆ ಕೂಡ ಸರ್ಕಾರದ ಮಟ್ಟದಲ್ಲಿ ಚಿಂತನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನ್‌ಲಾಕ್ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.