ಕರ್ನಾಟಕ ಚುನಾವಣೆ: ಬಿಜೆಪಿಗೆ ಪ್ರಧಾನ್-ಅಣ್ಣಾಮಲೈ ಸಾರಥ್ಯ

ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು ಶನಿವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಪಕ್ಷ ಸಂಘಟನೆಯಲ್ಲಿ ಅನುಭವವಿರುವ ಪ್ರಧಾನ್, ಈ ಹಿಂದೆಯೂ ಹಲವು ಚುನಾವಣೆಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರನ್ನು ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಕರ್ನಾಟಕಕ್ಕೆ ಅಣ್ಣಾಮಲೈ ಹೊಸಬರೇನಲ್ಲ. ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಸಿಂಘಂ ಎಂದು ಖ್ಯಾತಿವೆತ್ತಿದ್ದ ಅಣ್ಣಾಮಲೈ ಇಲ್ಲಿನವರಿಗೆ ಚಿರಪರಿಚಿತ ಹೆಸರು.

ಕರ್ನಾಟಕದಲ್ಲಿ ಈ ವರ್ಷದ ಮಧ್ಯಭಾಗದಲ್ಲಿ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದು, ಜನರಿಗೆ ಆಶ್ವಾಸನೆಗಳ ಮಹಾಪೂರವನ್ನೇ ಹರಿಸುತ್ತಲಿವೆ. ಎಲ್ಲಾ ಪಕ್ಷಗಳಲ್ಲಿರುವ ಆಂತರಿಕ ಬಿಕ್ಕಟ್ಟುಗಳನ್ನು ಶಮನಗೊಳಿಸಿ ಐಕ್ಯಮತದಿಂದ ಚುನಾವಣೆ ಎದುರಿಸುವಂತೆ ಮಾಡುವುದು ಆಯಾಯ ಪಕ್ಷಗಳ ಹೈಕಮಾಂಡ್ ಮತ್ತು ಉಸ್ತುವಾರಿಗಳಿಗೆ ದೊಡ್ಡ ಸವಾಲಾಗಲಿದೆ.