ನಾಳೆ (ಫೆ.1) ಕೇಂದ್ರ ಬಜೆಟ್ ಮಂಡನೆ: ಕರಾವಳಿ ಜನರಿಂದ ಭಾರೀ‌ ನಿರೀಕ್ಷೆ!

ಉಡುಪಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ (ಭಾನುವಾರ) ಒಂಭತ್ತನೆಯ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕರಾವಳಿ ಜನರಿಂದ ಬಹಳಷ್ಟು ನಿರೀಕ್ಷೆಗಳಿವೆ.

ಹೆಜಮಾಡಿ ಬಂದರು ಅಭಿವೃದ್ಧಿ, ಮಲ್ಪೆ ಬಂದರು ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ಫ್ಲೈ ಓವರ್ ಕಾಮಗಾರಿ ಮತ್ತು ಕಟಪಾಡಿ ಜಂಕ್ಷನ್ ಅಂಡರ್ ಪಾಸ್ ಕಾಮಗಾರಿಗೆ ಹೆಚ್ಚಿನ ಅನುದಾನ ಒದಗಿಸಬೇಕೆಂಬುವುದು ಕರಾವಳಿಗರ ಪ್ರಮುಖ ಬೇಡಿಕೆಯಾಗಿದೆ.

ನಾಳೆ ಮಂಡನೆಯಾಗುವ ಕೇಂದ್ರ ಬಜೆಟ್ ನಲ್ಲಿ ಹೆಜಮಾಡಿ ಬಂದರಿಗೆ ಇನ್ನಷ್ಟು ಅನುದಾನ ಒದಗಿಸಿ ಮಾದರಿ ಬಂದರನ್ನಾಗಿ ನಿರ್ಮಾಣ ಮಾಡಬೇಕು. ಮಲ್ಪೆ ಬಂದರಿನಲ್ಲಿ ನಡೆಯುತ್ತಿರುವ ಮೂರನೇ ಹಂತದ ಕಾಮಗಾರಿಗೂ ಹೆಚ್ಚಿನ ಅನುದಾನವನ್ನು ಕೇಂದ್ರ ಬಜೆಟ್ ನಲ್ಲಿ ಒದಗಿಸಿಕೊಡಬೇಕು. ಹಾಗೆಯೇ ಉಡುಪಿ- ಬೆಂಗಳೂರು ಮಾರ್ಗದಲ್ಲಿ ಹೆಚ್ಚುವರಿಯಾಗಿ ಎರಡು ರೈಲುಗಳನ್ನು ಓಡಿಸಬೇಕು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಅಂಡರ್ ಪಾಸ್, ಫ್ಲೈಓವರ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲು ಹೆಚ್ಚಿನ ಅನುದಾನ ನೀಡಬೇಕೆಂದು ಎಂದು ಕಾಂಗ್ರೆಸ್ ಮುಖಂಡ ಸುನೀಲ್ ಬಂಗೇರ ಆಗ್ರಹಪಡಿಸಿದ್ದಾರೆ.