ಉದ್ಯೋಗ ಸೃಜನ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ : 2019-20 ನೇ ಸಾಲಿನ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿ.ಎಂ.ಇ.ಜಿ.ಪಿ) ಯಡಿ ಸ್ವಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ / ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಯೋಜನೆಯು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುತ್ತದೆ.

ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ /ಯುವತಿಯರಿಗೆ  ಗರಿಷ್ಠ ಯೋಜನಾ ವೆಚ್ಚ ರೂ. 10 ಲಕ್ಷ ಬ್ಯಾಂಕ್ ಸಾಲದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಪ್ರಸ್ತುತ ಹೊಂದಿರುವ ಚಟುವಟಿಕೆ / ಘಟಕಗಳ ವಿಸ್ತರಣೆಗೆ ಅವಕಾಶ ಇರುವುದಿಲ್ಲ. ಯೋಜನಾ ವೆಚ್ಚದ ಶೇ. 25 ರಿಂದ 35 ರವರೆಗೆ ಸಹಾಯಧನ ನೀಡಲಾಗುವುದು.

ಅಭ್ಯರ್ಥಿಯು ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿದ್ದು, ಅರ್ಜಿದಾರರು ಕನಿಷ್ಠ 18 ವರ್ಷದವರಾಗಿರಬೇಕು. ವಯೋಮಿತಿಯು ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಮತ್ತು ವಿಶೇಷ ವರ್ಗದವರಿಗೆ (ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ/ ಅಲ್ಪ  ಸಂಖ್ಯಾತರು/ ಮಾಜಿ ಯೋಧರು/ ಅಂಗವಿಕಲರು) ಗರಿಷ್ಟ 45 ವರ್ಷ.

ನಿರುದ್ಯೋಗಿ ಯುವಕ/ ಯುವತಿಯರು ವೆಬ್‍ಸೈಟ್  ಮೂಲಕ ಆನ್‍ಲೈನ್ ಅರ್ಜಿಯನ್ನು ನೋಂದಾಯಿಸಬೇಕು. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆದವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಈ ಯೋಜನೆಯಲ್ಲಿ ಯಾವುದೇ ಆದಾಯ ಮಿತಿ ಇರುವುದಿಲ್ಲ. ಸರ್ಕಾರದ ನಿಯಮಾನುಸಾರ ವಿಶೇಷ ವರ್ಗದ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ಒಂದು ವಾರದ ಉದ್ಯವi ಶೀಲತಾ ತರಬೇತಿ ಪಡೆಯುವುದು  ಕಡ್ಡಾಯವಾಗಿರುತ್ತದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ 15 ರ ವರೆಗೆ ವಿಸ್ತರಿಸಲಾಗಿದೆ. ಇಂಟರ್‍ನೆಟ್‍ನಲ್ಲಿ ತೆಗೆದ ಅರ್ಜಿ ಪ್ರತಿಯನ್ನು ನಿಗದಿತ ದಾಖಲಾತಿಗಳೊಂದಿಗೆ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ರಜತಾದ್ರಿ, ಮಣಿಪಾಲ, ಉಡುಪಿ ಕಚೇರಿಗೆ ಸಲ್ಲಿಸಬೇಕು.

ಅರ್ಜಿಯ ಪ್ರಿಂಟ್ ಪ್ರತಿ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ.

ಹೆಚ್ಚಿನ ವಿವರಗಳಿಗೆ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆ.ವಿ.ಐ.ವಿ), ರಜತಾದ್ರಿ, ಮಣಿಪಾಲ, ಉಡುಪಿ (ದೂರವಾಣಿ ಸಂಖ್ಯೆ: 0820-2574855) ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.