ಆರೋಗ್ಯ ಗಂಭೀರವಾಗಿದ್ದರೂ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ: ಡಾ.ಸುಧಾ ವಿದ್ಯಾ ಸಾಗರ್

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆರೋಗ್ಯ ‌ಸ್ಥಿತಿ ಗಂಭೀರವಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡದ ನೇತೃತ್ವ ವಹಿಸಿರುವ ಡಾ.ಸುಧಾ ವಿದ್ಯಾ ಸಾಗರ್ ತಿಳಿಸಿದ್ದಾರೆ.

ಈ ಕುರಿತು  ಶುಕ್ರವಾರ ಸಾಯಂಕಾಲ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ವೈದ್ಯರ ತಂಡ ಶ್ರೀಗಳ ಆರೋಗ್ಯ, ಚಿಕಿತ್ಸೆ ಸಂಬಂಧಿಸಿ ಮಾಹಿತಿ ನೀಡಿದರು.

ಶ್ರೀಗಳಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ:

ಶ್ರೀಗಳಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌. ಆರೋಗ್ಯದ ಬಗ್ಗೆ ನಿಖರ‌ ಮಾಹಿತಿ ಒಂದೆರಡು ದಿನಗಳಲ್ಲಿ ತಿಳಿಸಲಾಗುವುದು. ಬೆಳಗ್ಗೆಗಿಂತ ಇಂದು‌ ಆರೋಗ್ಯ ಸ್ಥಿತಿ ಸುಧಾರಣೆ ಕಂಡಿದೆ‌. ಆದರೆ ಈಗಲೆ ಏನು ಹೇಳಲು‌ ಸಾದ್ಯವಿಲ್ಲ. ನಮ್ಮ ಚಿಕಿತ್ಸೆ ಮುಂದುವರೆದಿದೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.

ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಡಿ:

ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ. ಶ್ರೀಗಳ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ, ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬಾರದು. ಶ್ರೀಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಸಂದರ್ಶಕರು ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದ ವಿವಿಧ ಪ್ರಕ್ರಿಯೆಗಳಿಗೆ ಅಡಚಣೆಯಾಗುತ್ತಿದೆ‌. ದಯವಿಟ್ಟು ಸಂದರ್ಶಕರು ಆಸ್ಪತ್ರೆಗೆ ಭೇಟಿ‌ ನೀಡುವುದು ಬೇಡ. ಶ್ರೀಗಳ ಆರೋಗ್ಯದ ಮಾಹಿತಿಯನ್ನು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಹೆಲ್ತ್ ಬುಲೆಟಿನ್​ ಮೂಲಕ ತಿಳಿಸಲಾಗುವುದು ಎಂದರು.