ಪಟ ಪಟ ಹಾರೋ ಗಾಳಿಪಟ ಹೇಳಿತು ಮತದಾನದ ಸಂದೇಶ !

ಉಡುಪಿ: ಶನಿವಾರ ಸಂಜೆ ಮಲ್ಪೆಯ ಕಡಲತೀರದಲ್ಲಿ  ವಿಹರಿಸಲು ಬಂದವರಿಗೆ ಆಶ್ಚರ್ಯ ಕಾದಿತ್ತು,  ಕಡಲತೀರದಲ್ಲಿ ಅಂಗವಿಕಲರ ಬೈಕ್ ಜಾಥಾ, ಅಂಗವಿಕಲ ಮಕ್ಕಳ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮ, ಮೇಲೆ ನೋಡಿದರೆ ಬಾನಂಗಳದಲ್ಲಿ ಮತದಾನ ಸಂದೇಶ ಸಾರುವ ಅತ್ಯಾಕರ್ಷಕ ಗಾಳಿಪಟಗಳ ಹಾರಾಟ, ನೆರೆದಿದ್ದ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದವು.

ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಲ್ಪೆ ಬೀಚ್ ಅಭಿವೃಧ್ದಿ ಸಮಿತಿ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಮೂಡಿಸುವ ಸ್ವೀಪ್ ಕಾರ್ಯಕ್ರಮದಲ್ಲಿ , ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ವಿಕಲಚೇತನರು, ಮತದಾನ ಜಾಗೃತಿ ಮೂಡಿಸುವ ಪ್ರದರ್ಶನ ಫಲಕಗಳನ್ನು ತಮ್ಮ  ದ್ವಿಚಕ್ರ ವಾಹನಗಳಿಗೆ ಅಳವಡಿಸಿಕೊಂಡು ಮಲ್ಪೆಯಲ್ಲಿ ಮತದಾನ ಜಾಗೃತಿ ಮೂಡಿಸುವುದರ ಜೊತೆಗೆ, ಮತದಾನ ಮಾಡುವುದು ನಮ್ಮ ಸಿದ್ದ ಹಕ್ಕು, ಏಪ್ರಿಲ್ 18 ಮತ್ತು 23 ರಂದು ಮರೆಯದೇ ಮತದಾನ ಮಾಡಿ ಮುಂತಾದ ಸಂದೇಶಗಳಿದ್ದ ತಮಗಾಗಿ ಸಿದ್ದಪಡಿಸಿದ್ದ ಗಾಳಿಪಟಗಳನ್ನು ಹಾರಿಸುವುದರ ಮೂಲಕ  ಮತದಾನ ಸಂದೇಶ ಸಾರಿದರು.

 ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಬಂದಿದ್ದ ವೃತ್ತಿಪರ ಗಾಳಿಪಟ ಹಾರಿಸುವವರು , ಟೆಡ್ಡಿಬೇರ್, ಡ್ರಾಗನ್, ರಿಂಗ್, ಸಿಂಗಲ್ ನೋಟ್, ಪೈಪ್‍ಲೈನ್ ಹಾಗೂ ರಾತ್ರಿ ವೇಳೆಯಲ್ಲಿ ಕಾಣುವ ಎಲ್.ಇ.ಡಿ  ಗಾಳಿಪಟ ಸೇರಿದಂತೆ ವಿವಿಧ ರೀತಿಯ ವೈವಿಧ್ಯಮಯ ಗಾಳಿಪಟಗಳಲ್ಲಿ ಮತದಾನದ ಸಂದೇಶ ರಚಿಸಿ, ನೋಡುಗರಲ್ಲಿ ಜಾಗೃತಿ ಮೂಡಿಸಿದರು.

   ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸಿಂದೂ ಬಿ ರೂಪೇಶ್ ಗಾಳಿಪಟ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಖೆ ಉಪ ನಿದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಭಾನುವಾರ ಕೂಡಾ ಗಾಳಿಪಟಗಳ ಹಾರಾಟ ನಡೆಯಲಿದೆ.