ನವೀಕರಣಗೊಂಡಿದೆ ಶಿರೂರು ಮೂಲ ಮಠ: ರಾಮನವಮಿ ಉತ್ಸವ ಸಂಭ್ರಮ

ಹಿರಿಯಡಕ: ಉಡುಪಿಯ ಅಷ್ಟಮಠಗಳಲ್ಲಿ ಹೆಸರಾದ ಶಿರೂರು ಮಠದ ಮೂಲ ಮಠದಲ್ಲಿ ರಾಮನವಮಿ ಮಹೋತ್ಸವವು ಶಿರೂರು ಮಠದ ದ್ವಂದ್ವಮಠವಾದ ಸೋದೆ ವಾದಿರಾಜ ಮಠಾಧೀಶರಾದ ವಿಶ್ವವಲ್ಲಭತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಲಿದೆ. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಏ.12 ರಂದು ಬೆಳಿಗ್ಗೆ ಗಣಹೋಮ, ಸೋದೆ ಹಾಗೂ ಶಿರೂರ ಮಠ ಸಂಸ್ಥಾನಗಳ ದೇವರ ಪೂಜೆ, ವೇದವ್ಯಾಸ ದೇವರ ಪೂಜೆ, ಪ್ರಾಣದೇವರ ಪೂಜೆ, ವಾದಿರಾಜರ ಪೂಜೆ ನಡೆಯಲಿದೆ. ಸಂಜೆ ಕಟ್ಟೆ ಪೂಜೆ, ಶ್ರೀ ಪ್ರಾಣದೇವರ ರಂಗಪೂಜೆ, ಭೂತರಾಜರ ಪೂಜೆ ನಡೆಯಲಿದೆ.

13 ರಂದು  ಬೆಳಿಗ್ಗೆ ಪಂಚಾಮೃತ ಮಹಾಭಿಷೇಕ ಸಹಿತ ವಿಶೇಷ ಪೂಜೆ, ಮನ್ಯುಸೂಕ್ತ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಪ್ರಾಣದೇವರ ವಿಶೇಷ ರಂಗಪೂಜೆ, ರಥೋತ್ಸವ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ ನಡೆಯಲಿದೆ. 14ರಂದು ಬೆಳಿಗ್ಗೆ ಅವಭೃತೋತ್ಸವ ನಡೆಯಲಿದೆ.

ಹೊಸತಾಯ್ತು ಮಠ:

ಸೋದೆ ಶ್ರೀಪಾದರ ನೇತೃತ್ವದಲ್ಲಿ  ಮೂಲಮಠವನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಸುಮಾರು  25 ಲಕ್ಷ  ವೆಚ್ಚದಲ್ಲಿ ಮಠವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಮಠದ ಗರ್ಭಗುಡಿಯ ಸುತ್ತ ನೆಲಕ್ಕೆ ಗ್ರಾನೈಟ್ ಹಾಕಿ, ಮಠದ ಹೆಂಚುಗಳನ್ನು ದುರಸ್ತಿಗೊಳಿಸಿ ಬಣ್ಣ ನೀಡಲಾಗಿದೆ. ಇಡೀ ಮಠಕ್ಕೆ ಬಣ್ಣ ನೀಡಲಾಗಿದೆ. ಮಠದ ಸಿಬ್ಬಂದಿಗೆ ಹಾಗೂ ಮಠಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಶೌಚಾಲಯವನ್ನು ನಿರ್ಮಿಸಲಾಗಿದ್ದು. ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳು ಇಲ್ಲಿ ನಡೆದಿದೆ.