ಉಡುಪಿ: ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ಆಗಮಿಸಿರುವ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೂತನ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಸ್ ಜ್ಯೋತಿಶ್ರೀ, ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಗಗನ್ ಎಂ.ಆರ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ನಾಗೇಶ್ ಎಂ.ಎ. ಅವರನ್ನು ಅಭಿನಂದಿಸಲಾಯಿತು.

ಬಳಿಕ ಮಾತನಾಡಿದ ನ್ಯಾಯಾಧೀಶೆ ಜ್ಯೋತಿಶ್ರೀ, ಉಡುಪಿ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಕೇವಲ 240 ಪ್ರಕರಣಗಳಿವೆ. ಇತರ ಜಿಲ್ಲೆಗಳಿಗೆ ಹೋಲಿಸಿದರೇ ಇಲ್ಲಿಯ ಜನತೆ ಕೌಟುಂಬಿಕ ಸಮಸ್ಯೆಗಳನ್ನು ಮನೆಯಲ್ಲೆ ಬಗೆಹರಿಸಿಕೊಳ್ಳುತ್ತಿದ್ದು, ನ್ಯಾಯಾಲಯದವರೆಗೆ ತಂದಿಲ್ಲ ಎಂಬುದು ತಿಳಿಯುತ್ತದೆ. ಇದು ಇಲ್ಲಿನ ಜನತೆಯ ಸಂಸ್ಕೃತಿಯನ್ನು ತಿಳಿಸುತ್ತದೆ. ಕುಟುಂಬ ಕಲಹಗಳು ನ್ಯಾಯಾಲಯದವರೆಗೆ ಹೋಗಬಾರದೆಂಬ ಪ್ರಜ್ಞೆ ಇಲ್ಲಿನ ಜನತೆಗಿರುವುದು ಉತ್ತಮ ಲಕ್ಷಣ ಎಂದರು.
ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣನವರ್ ವಹಿಸಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್ ಶುಭ ನುಡಿಗಳನ್ನಾಡಿದರು.
ಪೋಕ್ಸೊ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಶ್ರೀನಿವಾಸ್ ಸುವರ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಸಿಜೆಎಂ ಪುರುಷೋತ್ತಮ್, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಯೋಗೆಶ್ ಪಿಆರ್, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶ ಹಾಗು ಜೆಎಂಎಫ್ಸಿ ಅಬುತಾಹಿರ್ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ವಂದಿಸಿದರು. ವಕೀಲೆ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.












