ಮುಸ್ಲಿಮರು ರಾಷ್ಟ್ರ‌-ಹಿಂದೂ ವಿರೋಧಿ ಕೆಲಸ ನಿಲ್ಲಿಸಲಿ, ಅನಂತರವೇ ಒಟ್ಟಾಗೋಣ: ಅಚ್ಯುತ ಕಲ್ಮಾಡಿ

ಉಡುಪಿ: ಮುಸ್ಲಿಮರು ರಾಷ್ಟ್ರ ವಿರೋಧಿ ಹಾಗೂ ಹಿಂದೂ ವಿರೋಧಿ ಕೆಲಸಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು. ಆ ನಂತರ ನಮ್ಮನ್ನು ಅವರೊಂದಿಗೆ ಸೇರಿಸಿಕೊಳ್ಳುತ್ತೇವೆ ಎಂದು ವಿಎಚ್‌ಪಿ ಮುಖಂಡ ಅಚ್ಯುತ ಅಮೀನ್‌ ಕಲ್ಮಾಡಿ ಗದರಿದ್ದಾರೆ.
ಉಡುಪಿಯಲ್ಲಿ ಜ. 11ರಂದು ಆಯೋಜಿಸಲು ಉದ್ದೇಶಿಸಿರುವ ಬಿಲ್ಲವ ಮತ್ತು ಮುಸ್ಲಿಮ್‌ ಸ್ನೇಹ ಸಮಾವೇಶವದ ಕುರಿತು
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾವೇಶವನ್ನು ರದ್ದುಗೊಳಿಸಬೇಕು ಅಥವಾ ಸಮಾವೇಶದಿಂದ ಬಿಲ್ಲವ ಎಂಬ ಪದವನ್ನು ತೆಗೆಯಬೇಕು. ಇಲ್ಲದಿದ್ದರೆ ಜ. 9ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಎಲ್ಲ ಹಿಂದೂ ಸಮಾಜದವರು ಸೇರಿಕೊಂಡು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಹಿಂದೂಗಳನ್ನು ಜಾತಿ ಹೆಸರಿನಲ್ಲಿ ಒಡೆಯುವ ರಾಷ್ಟ್ರೀಯ ಷಡ್ಯಂತ್ರ. ಇದರಿಂದ ಈಗಾಗಲೇ ಬಿಲ್ಲವರಲ್ಲಿ ಎರಡು ಪಂಗಡಗಳಾಗಿವೆ. ಒಂದು ಪಂಗಡ ಸಮಾವೇಶವನ್ನು ವಿರೋಧಿಸಿದರೆ, ಒನ್ನೊಂದು ಪರವಾಗಿದೆ. ಈ ರೀತಿ ನಮ್ಮ ನಮ್ಮೊಳಗಿನ ಒಗ್ಗಟ್ಟನ್ನು ಒಡೆಯುವ ದೊಡ್ಡ ಸಂಚು ಇದಾಗಿದೆ. ಇದಕ್ಕೆ ಬಿಲ್ಲವ ಸಮಾಜವನ್ನು ಬಲಿ ಕೊಡಲು ನಾವು ಬಿಡುವುದಿಲ್ಲ ಎಂದರು.
ಬಿಲ್ಲವರು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲ ಜಾತಿ ಸಮುದಾಯಗಳೊಂದಿಗೆ ಸಾಮರಸ್ಯದೊಂದಿಗೆ ಬದುಕುತ್ತಿದ್ದಾರೆ. ಆದರೆ ಈಗ ಈ ಸಮಾವೇಶದಿಂದಾಗಿ ಬೇರೆ ಜಾತಿಯ ಟೀಕೆಗೆ ಗುರಿಯಾಗಿದ್ದೇವೆ. ನೀವು ಮುಸ್ಲಿಮರ ಸಂಸ್ಕೃತಿಯೊಂದಿಗೆ ಹೋಗುತ್ತಿದ್ದೀರಾ ಎಂಬಂತಹ ಟೀಕೆಗಳು ವ್ಯಕ್ತವಾಗುತ್ತಿದೆ. ಮುಸ್ಲಿಮರ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಬುರ್ಖಾ ಹಾಕುವ ಸಂಸ್ಕೃತಿ ಇದೆ. ಸಮಾವೇಶದ ಬಳಿಕ ಅವರು ಬುರ್ಖಾ ತೆಗೆಯುತ್ತಾರ ಅಥವಾ ಬಿಲ್ಲವ ಹೆಣ್ಣುಮಕ್ಕಳಿಗೆ ಬುರ್ಖಾ ಹಾಕಿಸುತ್ತಾರ? ಎಂಬಂತಹ ಟೀಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಕೃತಿಯೇ ಬೇರೆ ಅವರ ಸಂಸ್ಕೃತಿಯೇ ಬೇರೆ. ಬಿಲ್ಲವರು ದನದ ಮಾಂಸ ತಿನ್ನುವುದಿಲ್ಲ. ಹಾಗಾಗಿ ಇನ್ನು ಅವರು ದನದ ಮಾಂಸ ತಿನ್ನುವುದು ಬಿಡುತ್ತಾರ ಅಥವಾ ನಿಮ್ಮನ್ನು ತಿನ್ನಿಸುತ್ತಾರ ಎಂಬ ಪ್ರಶ್ನೆ ಎದ್ದಿದೆ. ಇದು ಯಾವ ರೀತಿಯ ಸಂಸ್ಕೃತಿಯ
ವಿನಿಯಮ ಎಂದು ಪ್ರಶ್ನಿಸಿದ ಅವರು, ಈ ಸಮಾವೇಶಕ್ಕೆ ಯಾರೆಲ್ಲ ಹೋಗುತ್ತೇವೆಂದು ಒಪ್ಪಿದ್ದಾರೋ ಅವರೆಲ್ಲ ವೈಯಕ್ತಿಕವಾಗಿ ಹೋಗಲಿ. ಆದರೆ, ಬಿಲ್ಲವ ಮುಖಂಡ ಎಂಬ ಹಣೆಪಟ್ಟಿಯೊಂದಿಗೆ ಯಾರು ಹೋಗಬಾರದು ಎಂದರು.
ಸಮಾವೇಶದಿಂದ ಬಿಲ್ಲವ ಎಂಬ ಶಬ್ದವನ್ನು ತೆಗೆಯಬೇಕು. ಇದು ಬಿಲ್ಲವರ ಸ್ವಾಭಿಮಾನದ ಪ್ರಶ್ನೆ. ದನ ಕಳ್ಳತನ, ಲವ್‌ ಜಿಹಾದ್‌ ಹಾಗೂ ಹಿಂದೂ ಯುವಕರ ಹತ್ಯೆಗೆ ಬಿಲ್ಲವರು ಸಪೋರ್ಟ್‌ ಮಾಡುವುದಿಲ್ಲ. ಅದೆಲ್ಲವನ್ನು ಮುಸ್ಲಿಮರು ತ್ಯಜಿಸಿ ಬಂದಿದ್ದರೆ,
ಅವರೊಂದಿಗೆ ನಾವು ಖಂಡಿತವಾಗಿಯೂ ನಿಲ್ಲುತ್ತಿದ್ದೇವು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ನಾವು ತಿರಸ್ಕರಿಸುತ್ತೇವೆ, ನೀವು ತಿರಸ್ಕರಿಸಿ. ಸಂವಿಧಾನದಲ್ಲಿ ಆದ ನಿರ್ಣಯವನ್ನು ನಾವು ದಿಕ್ಕರಿಸುತ್ತೇವೆ, ನೀವು ದಿಕ್ಕರಿಸಿ ಎಂದು ಹೇಳಲು ಬರುತ್ತೀರಾ?. ಬಿಲ್ಲವ ಸಮಾಜ ಇದನ್ನು ಖಂಡಿತವಾಗಿಯೂ ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ವಿರೋಧ ಅವರ ಸ್ನೇಹ ಸಮಾವೇಶಕ್ಕೆ ಅಲ್ಲ. ಬಿಲ್ಲವ ಎಂಬ ಶಬ್ದವನ್ನು ಬಳಸಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪೂಜಾರಿ ನಕುಲು ಪೂರಾ ಸಾಯಿಬೇರ್ನೊಟ್ಟುಗು ಪೋದು ಅಂಡಾ’ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರಿಂದ ಬಿಲ್ಲವ ಸಮಾಜಕ್ಕೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡ ಕಿರಣ್‌ ಕುಮಾರ್‌ ಮಾತನಾಡಿ, ಹಿಂದೂ ಹೆಣ್ಣುಮಕ್ಕಳನ್ನು ಲವ್‌ ಜಿಹಾದಿಗೆ ಒಳಪಡಿಸಿದರೆ ಹಾಗೂ ಹಿಂದೂ ಯುವಕನ ಹತ್ಯೆ ಮಾಡಿದರೆ ಅಂತಹ ಮುಸ್ಲಿಮರಿಗೆ ಮಸೀದಿಗೆ ಪ್ರವೇಶ ನೀಡುವುದಿಲ್ಲವೆಂದು ಮುಸ್ಲಿಮರು ಗಟ್ಟಿಯಾಗಿ ಹೇಳಲಿ. ಅವರ ಯುವಕರಿಗೆ ಯಾವುದೇ ಸಂದೇಶ ನೀಡದೆ, ಕೇವಲ ಬಿಲ್ಲವ ಸಮುದಾಯದ ಸಾಂಸ್ಕೃತಿಕ ವೈಚಾರಿಕತೆಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಎನ್ನುವುದಾರೆ ಇದು ಯಾವ ರೀತಿಯ ಸಮಾವೇಶ?. ಮುಸ್ಲಿಮರಿಂದ ಬಿಲ್ಲವ ಸಮಾಜಕ್ಕೆ ಘೋರ ಅನ್ಯಾಯವಾಗಿದೆ. ಹಾಗಾಗಿ ನಮ್ಮ ಸಮಾಜ ಯಾವತ್ತೂ ಮುಸ್ಲಿಮರೊಂದಿಗೆ ಹೊಂದಾಣಿಕೆ ಮಾಡಲ್ಲ ಎಂದರು.
ಈ ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಹೆಚ್ಚಿನವರು ತಲೆ ಹಿಡುಕರೇ ಇದ್ದಾರೆ. ನಿಮಗೆ ರಾಜಕೀಯ ಚಟ ಇದ್ದಾರೆ. ನೀವು ಹಿಂದೂ ಮುಸ್ಲಿಮ್‌ ಸ್ನೇಹ ಬಾಂಧವ್ಯ ಮಾಡಿ. ನಮ್ಮದು ಯಾವುದೇ ಅಭ್ಯಯಂತರವಿಲ್ಲ. ಆದರೆ ಇದರ ಮಧ್ಯೆ ಬಿಲ್ಲವ ಸಮಾಜವನ್ನು ಎಳೆದು ತರಬೇಡಿ. ಸಮಾವೇಶದಿಂದ ಬಿಲ್ಲವ ಶಬ್ದವನ್ನು ತೆಗೆಯರಿ. ಇಲ್ಲದಿದ್ದರೆ ನಂತರ ನಡೆಯುವ
ಪ್ರತಿಭಟನೆಗಳಿಗೆ ಸಮಾವೇಶ ಆಯೋಜಕರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಸಾಸ್ತಾನ ಚಂದು ಪೂಜಾರಿಯ ಮೊಮ್ಮಗ ರಿಷಿ ರಾಜ್‌ ಮಾತನಾಡಿ, ಸ್ನೇಹ ಸಮಾವೇಶದ ವೇದಿಕೆಗೆ‌ ನಮ್ಮ ಬಳಿ ಚರ್ಚಿಸದೆ, ನನ್ನ ಅಜ್ಜ ಸಾಸ್ತಾನ ಚಂದು ಪೂಜಾರಿ ಅವರ ಹೆಸರು ಇಟ್ಟಿದ್ದಾರೆ. ಅದನ್ನು ಕೂಡಲೇ ತೆಗೆಯಬೇಕು. ಅವರು ಬೇಕಾದರೆ ವೇದಿಕೆಗೆ ವಿನಯ ಕುಮಾರ್‌ ಸೊರಕೆ ಹೆಸರನ್ನು ಇಡಲಿ. ನಮ್ಮ ಅಭ್ಯಯಂತರವಿಲ್ಲ ಎಂದರು.
ಗೋಷ್ಠಿಯಲ್ಲಿ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಸುನಿಲ್‌ ಕೆ.ಆರ್‌., ಬಿಲ್ಲವ ಸಂಘದ ಮುಖಂಡರಾದ ನವೀನ್‌ ಅಮೀನ್‌ ಶಂಕರಪುರ, ರಾಮಚಂದ್ರ ಸನಿಲ್‌, ಮಹೇಶ್‌ ಪೂಜಾರಿ ಕುಂದಾಪುರ, ಬಿ.ಪಿ. ರಮೇಶ್‌ ಪೂಜಾರಿ ಇದ್ದರು.
ಬಿಲ್ಲವ ಸಮಾಜಕ್ಕೆ ಮಾಡಿದ ಅವಮಾನ
ಇದು ರಾಜಕೀಯ ಪ್ರೇರಿತ ಸಮಾವೇಶ. ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಬಿಲ್ಲವ ಸಮಾಜವನ್ನು ಬಲಿ ಕೊಡುವುದು ಸರಿಯಲ್ಲ. ಬಿಲ್ಲವ ಸಮಾಜ ಯಾವುದೇ ಒಂದು ಸಂಘಟನೆ ಅಥವಾ ಪಕ್ಷಕ್ಕೆ ಸೀಮಿತವಾಗಿಲ್ಲ. ಆದರೆ ಬಿಲ್ಲವ ಹಾಗೂ ಮುಸ್ಲಿಮ್‌ ಶಬ್ದದೊಂದಿಗೆ ಸೇರಿಸಿರುವುದು ಇಡೀ ಬಿಲ್ಲವ ಸಮಾಜಕ್ಕೆ ಮಾಡಿದ ಅವಮಾನ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮುಖಂಡ ಕಿರಣ್‌ ಕುಮಾರ್‌ ಹೇಳಿದರು.