ಉಡುಪಿ: ಲಾಕ್ ಡೌನ್ ನಿಯಮ‌ ಉಲ್ಲಂಘನೆ ವಿರುದ್ಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ; ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಸೀಜ್, ಅಂಗಡಿಗಳ ವಿರುದ್ಧ ಕ್ರಮ

ಉಡುಪಿ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಈ ಅವಕಾಶವನ್ನು ಕೆಲವರು ದುರ್ಬಳಕೆ ಮಾಡಿಕೊಂಡು ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಸ್ವತಃ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರೇ ಫೀಲ್ಡ್ ಗೆ ಇಳಿದಿದ್ದಾರೆ.

ಸಂಚಾರ ದಟ್ಟನೆ ಹೆಚ್ಚಾಗಿದ್ದ ಮಲ್ಪೆ ಮುಖ್ಯರಸ್ತೆಗೆ ಏಕಾಏಕಿ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಕಡಿವಾಣ ಹಾಕಿದರು. ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ಚದುರಿಸಿದರು. ಅಲ್ಲದೆ, ಅಗತ್ಯ ಸಾಮಗ್ರಿಗಳನ್ನು ಮನೆಯ ಸಮೀಪದ ಅಂಗಡಿಗಳಲ್ಲಿಯೇ ಖರೀದಿಸಬೇಕು. ಇಲ್ಲದಿದ್ದರೆ, ವಾಹನ ಸೀಜ್ ಮಾಡುತ್ತೇವೆಂದು ಖಡಕ್ ಎಚ್ಚರಿಕೆ ನೀಡಿದರು.

ಆ ಬಳಿಕ ಉಡುಪಿ ನಗರದಲ್ಲಿ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುತ್ತಿದ್ದ ವಾಹನಗಳನ್ನು ಜಿಲ್ಲಾಧಿಕಾರಿಯವರು ಸೀಜ್ ಮಾಡಿದರು. ಅಲ್ಲದೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚೆಕ್ ಪೋಸ್ಟ್ ಗಳಲ್ಲಿ ಅಲರ್ಟ್:
ಇಂದಿನಿಂದ ಎಲ್ಲ ಚೆಕ್ ಪೋಸ್ಟ್ ಗಳನ್ನು ಅಲರ್ಟ್ ಮಾಡಲಾಗಿದ್ದು, ಬಹುತೇಕ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ.