ಉಡುಪಿ: ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಹಲವಾರು ದಾರ್ಶನಿಕರುಗಳು ಸರಳ ಜೀವನ ನಡೆಸವುದರೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮಾಜ ಸುಧಾರಣೆಗೆ ಮಾರ್ಗದರ್ಶನವನ್ನು ನೀಡಿದ್ದಾರೆ.
ಇಂತಹ ಮಹನೀಯರುಗಳು ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದ್ದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಮತ್ತಿತರ ಮಹನೀಯರುಗಳು ಸಮಾಜ ಸುಧಾರಣೆಗೆ
ಶ್ರಮಿಸಿದ್ದಾರೆ. ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ನೆನೆಯುವ ಸಲುವಾಗಿ ಹಾಗೂ ಮುಂದಿನ ಪೀಳಿಗೆಗೆ ಇವರುಗಳ
ಜೀವನಾದರ್ಶಗಳನ್ನು ತಿಳಿಸುವ ಸಲುವಾಗಿ ಜಯಂತಿ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಮಹನೀಯರುಗಳು ನೀಡಿದ ಸಂದೇಶಗಳು ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದ್ದು, ಇವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ರೇಣುಕಾಚಾರ್ಯ ಹಾಗೂ ಕೈವಾರ ತಾತಯ್ಯ ಅವರು ತಮ್ಮ ಬದುಕಿನಲ್ಲಿ ಕಂಡುಕೊಂಡಿದ್ದ ಸತ್ಯಗಳಿಂದಲೇ ಜಗತ್ತನ್ನು
ಉದ್ದಾರ ಮಾಡಲು ಪ್ರಯತ್ನಿಸಿದ್ದರು. ತಮ್ಮದೇ ಶೈಲಿಯಲ್ಲಿ ಸಮಾಜ ಸುಧಾರಣೆಯ ಮಾರ್ಗಗಳನ್ನು ಕಂಡುಕೊಂಡಿದ್ದರು ಎಂದ
ಅವರು, ಪ್ರತಿಯೊಬ್ಬರಲ್ಲೂ ಇತರರ ಬಗ್ಗೆ ಒಳ್ಳೆಯ ಭಾವನೆ ಹೊಂದಿರಬೇಕು. ಮಕ್ಕಳು ತಮ್ಮ ತಂದೆ-ತಾಯಿಗಳಿಗೆ
ವಿಧೇಯರಾಗಿರುವುದರೊಂದಿಗೆ ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ
ಉತ್ತಮ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಚಿಂತನೆ ನಡೆಸಬೇಕು ಎಂದರು.
ಉಪನ್ಯಾಸ ನೀಡಿ ಮಾತನಾಡಿದ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ, 18 ನೇ ಶತಮಾನದ ಕಾಲಜ್ಞಾನಿಗಳಾದ ಯೋಗಿ ನಾರೇಯಣ ಯತೀಂದ್ರರು, ತಮ್ಮ ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಬೇಸತ್ತು
ಕುಟುಂಬವನ್ನು ತೊರೆದ ಇವರು ಧ್ಯಾನ ಮಾಡುತ್ತಾ ಭಗವಂತನ ಇರುವಿಕೆಯನ್ನು ಕಂಡುಕೊಳ್ಳಲು ಆಧ್ಯಾತ್ಮದತ್ತ ಮುಖಮಾಡುತ್ತಾರೆ.
ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆಗಳು, ತತ್ವಪದಗಳು ಮತ್ತು ಭವಿಷ್ಯವಾಣಿಗಳನ್ನು (ಕಾಲಜ್ಞಾನ) ರಚಿಸುವುದರೊಂದಿಗೆ ಸುಧೀರ್ಘ 110 ವರ್ಷಗಳ ಕಾಲ ಬದುಕುವುದರೊಂದಿಗೆ ಕೈವಾರ ತಾತಯ್ಯನಾಗಿ ಸಮಾಜಕ್ಕೆ ಭಕ್ತಿ ಮತ್ತು ಮಾನವೀಯತೆಯನ್ನು ಬೋಧಿಸಿ, ಪವಾಡ ಪುರುಷರು ಎಂದೆನಿಸಿಕೊಂಡಿದ್ದಾರೆ ಎಂದರು.
ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರಾದ ಜಗದ್ಗುರು ರೇಣುಕಾಚಾರ್ಯ ಅವರು ಸುಮಾರು 900-
1000 ವರ್ಷಗಳ ಹಿಂದೆ ಬದುಕಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಅವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಋಷಿಗಳ ಜೊತೆಯಲ್ಲಿ ಶಿವತತ್ವವನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಶಿವತತ್ವವನ್ನು ಜಗತ್ತಿಗೆ ಸಾರಿದ್ದರು. ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು ಎಂದರು.
ಕಾರ್ಯಕ್ರಮದಲ್ಲಿಉಪ ತಹಶೀಲ್ದಾರ್ ಗಳಾದ ನವನೀತ್ ಹಾಗೂ ಜಯಲಕ್ಷ್ಮಿ, ಸಮುದಾಯದ ಸದಸ್ಯರು, ಜಿಲ್ಲಾಡಳಿತದ
ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಿಬ್ಬಂದಿ
ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ಧಬಸಯ್ಯ ಚಿಕ್ಕಮಠ ವಂದಿಸಿದರು.
















