ಜೂ.21 ರಂದು ಸುಪ್ತದೀಪ್ತಿಯವರ ದ್ವಿಕೃತಿ ಅನಾವರಣ

ಉಡುಪಿ: ‘ಸುಪ್ತದೀಪ್ತಿ’ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿರುವ ಜ್ಯೋತಿ ಮಹಾದೇವ್ ಅವರ ಪ್ರಬಂಧ ಮತ್ತು ಕವನ ಸಂಕಲನಗಳ ಅನಾವರಣ ಜೂನ್ 21ರಂದು ಅಪರಾಹ್ನ 3.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಕ್ಷರ ಲೋಕದ ನೋಟಗಳು ಪ್ರಬಂಧ ಸಂಕಲನವನ್ನು ಆರ್.ಆರ್.ಸಿ ಸಹಸಂಶೋಧಕ ಡಾ. ಅರುಣ ಕುಮಾರ್ ಎಸ್. ಆರ್. ಹಾಗೂ ಕವನ ಸಂಕಲನ ದೀಪ ನಕ್ಕಿತು ಕೃತಿಯನ್ನು ಪ್ರಸಿದ್ಧ ಕಾದಂಬರಿಕಾರ ಎಂ. ಆರ್. ದತ್ತಾತ್ರಿ ಬಿಡುಗಡೆಗೊಳಿಸುವರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಭ್ಯಾಗತರಾಗಿ ಆಗಮಿಸಲಿದ್ದು, ಮಂಗಳೂರಿನ ಕಲ್ಲಚ್ಚು ಪ್ರಕಾಶನದ ಪ್ರಕಾಶಕ, ಸಾಹಿತಿ ಮಹೇಶ ಆರ್. ನಾಯಕ್ ಮತ್ತು ಶ್ರೀರಾಮ ಪ್ರಕಾಶನದ ಅಚ್ಯುತಾನಂದ ಎಂ.ಸಿ‌ ಉಪಸ್ಥಿತರಿರುವರು. ಅಮೆರಿಕನ್ನಡಿತಿ ಕಥೆಗಾರ್ತಿ ತ್ರೀವೇಣಿ ಶ್ರೀನಿವಾಸ ರಾವ್ ನಿರೂಪಿಸುವರು.

ಸುದೀರ್ಘ ಕಾಲ ಅಮೆರಿಕದಲ್ಲಿ ನೆಲೆಸಿ, ಇದೀಗ ಮಣಿಪಾಲ ನಿವಾಸಿಯಾಗಿರುವ ಜ್ಯೋತಿ ಮಹಾದೇವ್ ಅನೇಕ ಮಹತ್ತ್ವದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.