ಉಡುಪಿ: ನಗರಸಭೆಯ 25 ನೇ ಕುಂಜಿಬೆಟ್ಟು ವಾರ್ಡಿನಲ್ಲಿ ಬರುವ ಗೋವಿಂದ ಪುಷ್ಕರಣಿ 1 ನೇ ಅಡ್ಡರಸ್ತೆ ಬಳಿ ಇರುವ ಟ್ರಾನ್ಸಫಾರ್ಮರ್ (ವಿದ್ಯುತ್ ಪರಿವರ್ತಕ) ಕಂಬವು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ. ಗಾಳಿಮಳೆಗೆ ದುರಂತ ಸಂಭವಿಸುವ ಸಾಧ್ಯತೆ ಇದೆ. ಮಳೆ ನೀರು ಹರಿಯುವ ನೀರಿನ ಕಾಲುವೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಿರುವ ಒಂದು ಕಂಬವಿದ್ದರೆ ಮತ್ತೊಂದು ಕಂಬ ಕಾಲುವೆ ದಂಡೆಯ ಮೇಲಿದೆ. ಬೀಳುವ ಮೂನ್ಸೂಚನೆ ತಿಳಿದು ಕಂಬಕ್ಕೆ ಎರಡು ಹಗ್ಗಗಳನ್ನು ಕಟ್ಟಿ ಖಾಸಗಿಯವರ ತೆಂಗಿನ ಮರಕ್ಕೆ ಕಟ್ಟಿಡಲಾಗಿದೆ.
ನವಂಬರ್ 28 ರಂದು ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸನಿಹದ ಗದ್ದೆ ಬಯಲಿನಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದೇ ಸ್ಥಳದಲ್ಲಿಯೇ ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ಕಂಬವಿದೆ. ಸುರಕ್ಷೆತೆಯ ಕಾರಣದಿಂದ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಮೆಸ್ಕಾಂ ಇಲಾಖೆ, ನಗರಸಭೆ ತುರ್ತಾಗಿ ಈ ಸ್ಥಳವನ್ನು ಪರಿಶೀಲಿಸಿ, ಎದುರಾಗಿರುವ ಸಮಸ್ಯೆಯನ್ನು ಸುವ್ಯವಸ್ಥೆಗೊಳಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

















