ಉಡುಪಿ: ದೇಶದಲ್ಲಿ ಸುಸ್ಥಿರ ಹಾಗೂ ಜವಾಬ್ದಾರಿಯುತ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಜಾಗತಿಕ ಮಟ್ಟದಲ್ಲಿ 50 ಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜಾಗತಿಕ ಪ್ರವಾಸೋದ್ಯಮ ತಾಣ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುಸ್ಥಿರತೆಯನ್ನು ಮುನ್ನೆಲೆಗೆ ತರುವುದು ಮತ್ತು ನೈಸರ್ಗಿಕ, ಸಾಂಸ್ಕೃತಿಕ ಸಂಪನ್ಮೂಲಗಳನ್ನು ರಕ್ಷಿಸುವುದರೊಂದಿಗೆ ಪರಿಸರ ಸ್ನೇಹಿಯಾಗಿ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಪ್ರವಾಸಿಗರನ್ನು ಆಕರ್ಷಿಸುವುದು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವ ಗುರಿಯೊಂದಿಗೆ ಡೆಸ್ಟಿನೇಷನ್ ಡೆವಲಪ್ಮೆಂಟ್ ಸ್ಕೀಮ್ ಅನ್ನು ಜಾರಿಗೆ ತಂದಿದೆ ಎಂದರು.
ಜಿಲ್ಲೆಯಲ್ಲಿ ಈ ಯೋಜನೆಗೆ ಕೋಡಿ- ಕನ್ಯಾನ, ಕೋಡಿ ಕುಂದಾಪುರ, ಬಾರ್ಕೂರು ಪೋರ್ಟ್ ಪ್ರದೇಶ ಹಾಗೂ ತ್ರಾಸಿ-ಮರವಂತೆ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಯೋಜನೆಗಳಲ್ಲಿ ನವೀಕರಿಸಬಹುದಾದದ ಇಂಧನಗಳ ಬಳಕೆ, ಮೂಲ ಸೌಕರ್ಯ ಹಾಗೂ ಪ್ರವಾಸಿಗರಿಗೆ ಜಾಗತಿಕ ಅಭಿಯಾನಗಳು ಸೇರಿ, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲೆಯ ಒಂದು ಪ್ರವಾಸಿ ತಾಣವನ್ನು ಆಯ್ಕೆಮಾಡಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಲು 300 ಕೋಟಿ ಅನುದಾನ ನೀಡಲಿದೆ ಎಂದ ಅವರು, ಈ ಪ್ರವಾಸಿ ತಾಣದ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುವುದು, ಇದಕ್ಕೆ ಅಗತ್ಯವಿರುವ ಭೂಮಿಯನ್ನೂ ಸಹ ಒದಗಿಸುವುದು ಅಗತ್ಯವಿದೆ ಎಂದರು.
ಐ.ಪಿ.ಇ ಗ್ಲೋಬಲ್ನ ಹೇಮಲತಾ, ಜಿಲ್ಲೆಯಲ್ಲಿ ನ್ಯಾಷನಲ್ ಮಿಷನ್ ಫಾರ್ ಡೆವಲಪಿಂಗ್ 50 ಗ್ಲೋಬಲಿ ಕಾಂಪಿಟೇಟಿವ್ ಟೂರಿಸಂ ಡೆಸ್ಟಿನೇಷನ್ಸ್ ಅನ್ನು ಅಭಿವೃದ್ಧಿಪಡಿಸಿರುವ ಸ್ಥಳಗಳನ್ನು ಪಿ.ಪಿ.ಟಿ. ಮೂಲಕ ಪ್ರದರ್ಶಿಸಿ, ಸವಿವರವಾಗಿ ಪ್ರಸ್ತುತಪಡಿಸಿದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಉಡುಪಿ ಜಿಲ್ಲೆಯು 93 ಕಿ.ಮೀ ಉದ್ದದ ಕರಾವಳಿ ತೀರ, ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯ, ಹಳ್ಳ, ಕೊಳ್ಳ, ಹೊಳೆಗಳನ್ನು ಹೊಂದಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿತವಾಗಿ ಮಾಡಿದೆ ಎಂದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















