ಉಡುಪಿ: ವೀಕೆಂಡ್ ಕರ್ಫ್ಯೂ ಬಗ್ಗೆ ನಾಳೆ ಅಂತಿಮ ನಿರ್ಧಾರ

ಉಡುಪಿ: ರಾಜ್ಯ ಸರಕಾರದ ಆದೇಶದಂತೆ ಉಡುಪಿ ಜಿಲ್ಲೆಯಲ್ಲೂ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸುವ ಬಗ್ಗೆ ನಾಳೆ (ಸೆ.10) ಬೆಳಿಗ್ಗೆ ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ.ಅವರು ಕೈಗೊಳ್ಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಇಂದು ಜಿಲ್ಲಾ ಕೋವಿಡ್ ನಿಯಂತ್ರಣ ತಜ್ಞರ ಸಮಿತಿ ಹಾಗೂ ಸಂಬಂಧಿತ ಇತರರ ಜೊತೆ ವ್ಯಾಪಕ ಚರ್ಚೆ ನಡೆದಿದೆ.‌ ಈ ನಿಟ್ಟಿನಲ್ಲಿ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ನಾಳೆ ಸಚಿವರು, ಶಾಸಕರೊಂದಿಗೆ ಇನ್ನಷ್ಟು ಚರ್ಚಿಸಿ ಮತ್ತೊಂದು ಸುತ್ತಿನ ಚರ್ಚೆಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನಾಳೆ ವಾರಾಂತ್ಯ ಕರ್ಫ್ಯೂ ಬಗ್ಗೆ ಮಾತ್ರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಪ್ರಸ್ತುತ ಇರುವ ರಾತ್ರಿ 9ರಿಂದ ಇರುವ ರಾತ್ರಿ ಕರ್ಫ್ಯೂ ಹಾಗೆ ಮುಂದುವರಿಯಲಿದೆ ಎಂದು ಸದಾಶಿವ ಪ್ರಭು ತಿಳಿಸಿದರು.
ವೀಕೆಂಡ್ ಕರ್ಪ್ಯೂ ರದ್ದುಗೊಳಿಸಿ:
ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಹೀಗಾಗಿ ವಾರಾಂತ್ಯ ಕರ್ಫ್ಯೂವನ್ನು ತೆರವುಗೊಳಿಸುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಒತ್ತಾಯಿಸಿದ್ದಾರೆ. ಪಾಸಿಟಿವಿಟಿ ರೇಟ್ ಇಳಿಮುಖವಾಗ ಹಿನ್ನೆಲೆಯಲ್ಲಿ ಈಗ ಕರ್ಫ್ಯೂ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.