ಉಡುಪಿ: ಜೂನ್ ತಿಂಗಳ ವೇತನ ನೀಡಲು ಬಿಆರ್ ಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಗೆ; ಮುಷ್ಕರ ಕೈಬಿಟ್ಟ ಸಿಬ್ಬಂದಿ

ಉಡುಪಿ: ಎರಡು ದಿನದೊಳಗೆ ಸಿಬ್ಬಂದಿಗಳಿಗೆ ಜೂನ್ ತಿಂಗಳ ವೇತನ ಜಮಾ ಮಾಡುವುದಾಗಿ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ಮಂಡಳಿ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದ ನಿರಂತರ ಪ್ರತಿಭಟನೆ ನಡೆಸುತಿದ್ದ ಸಿಬ್ಬಂದಿಗಳು ಪ್ರತಿಭಟನೆ ಯನ್ನು ಕೈಬಿಟ್ಟಿದ್ದಾರೆ.

ಸಿಬ್ಬಂದಿಗಳ ಬಾಕಿ ವೇತನ ಪಾವತಿಗಾಗಿ ಸರಕಾರ ನೀಡಿದ 50 ಲಕ್ಷ ರೂ. ಹಣವನ್ನು ಮೇ ತಿಂಗಳ ಶೇ.60ರಷ್ಟು ವೇತನವನ್ನು ಮಾತ್ರ ಆಡಳಿತ ಮಂಡಳಿ ನೀಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಡಿಎಚ್‌ಓ ಡಾ.ಉಡುಪ ಅವರೊಂದಿಗೆ ಇಂದು ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದು, ಇದರಲ್ಲಿ ಕೂಡಲೇ ಜೂನ್ ತಿಂಗಳ ಸಂಬಳವನ್ನು ನೀಡುವಂತೆ ತಿಳಿಸಿದ್ದರು.
ಇದಕ್ಕೆ ಆಡಳಿತ ಮಂಡಳಿ ಒಪ್ಪಿದ್ದು, ಎರಡು ದಿನದೊಳಗೆ ಎಲ್ಲರಿಗೂ ವೇತನ ಜಮಾ ಮಾಡುವುದಾಗಿ ಹೇಳಿದೆ.