ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಖಂಡನೀಯ: ಶ್ರೀನಿಧಿ ಹೆಗ್ಡೆ

ಉಡುಪಿ: ಸಾಂವಿಧಾನಿಕ ಹುದ್ದೆಯಲ್ಲಿ ಇರುವ ದಲಿತ ನಾಯಕನನ್ನು ಕಾಂಗ್ರೆಸ್ ಗೂಂಡಾಗಳು ದಿಗ್ಬಂಧನ ಹಾಕಿ, ದಬ್ಬಾಳಿಕೆ ನಡೆಸಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರದ ಅಂಧ ದರ್ಬಾರ್ ಗೆ ಸ್ಪಷ್ಟ ಸಾಕ್ಷಿ. ಅಧಿಕಾರದಲ್ಲಿ ಇರುವವರನ್ನು ಪ್ರಶ್ನಿಸಿದರೆ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಎಂದು ಬಿಂಬಿಸುವ ಕಾಂಗ್ರೆಸ್ ನಾಯಕರು ತಮ್ಮ ನಡೆಯ ಮೂಲಕ ಟೀಕೆ ಟಿಪ್ಪಣಿಯನ್ನು ಸ್ವೀಕರಿಸಲಾಗದೆ ಗೂಂಡಾಗಳ ಮೂಲಕ ದೌರ್ಜನ್ಯ ನಡೆಸುತ್ತಾ ಇರುವುದು ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯನ್ನ ನೆನಪಿಸುತ್ತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಆರೋಪಿಸಿದ್ದಾರೆ.

ಅಧಿಕಾರ ಎಂಬುದು ಶಾಶ್ವತ ಅಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ತಿಳಿಯದೇ ಇರುವುದು ವಿಪರ್ಯಾಸ, ತಮ್ಮ ತಂದೆಯ ನೆರಳು ಇಲ್ಲದೆ ಇದ್ದಿದ್ದರೆ ಇಂದು ಪಂಚಾಯತ್ ಸದಸ್ಯ ಆಗುವುದು ಕೂಡ ಪ್ರಿಯಾಂಕ್ ಗೆ ಸಾಧ್ಯವಾಗುತ್ತಿರಲಿಲ್ಲ. ವಿಧಾನ ಪರಿಷತ್ ಪ್ರತಿಫಕ್ಷದ ನಾಯಕ ತನ್ನ ಸ್ವಂತ ಅಭಿಪ್ರಾಯ ತಿಳಿಸಲು ಸಾಧ್ಯವಾಗದ ಪರಿಸ್ಥಿತಿಯ ಅಥವಾ ವ್ಯವಸ್ಥಿತ ಷಡ್ಯಂತ್ರ ನಡೆಸುವ ರಾಜ್ಯದ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯನ್ನು ಯಾವ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುತ್ತಿದೆ. ಪೊಲೀಸರು ಛಲವಾದಿ ನಾರಾಯಣ ಸ್ವಾಮಿಯವರ ವಿರುದ್ಧ ದೌರ್ಜನ್ಯ ಎಸಗಿದ ಕಾಂಗ್ರೆಸ್ಸ್ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ